ADVERTISEMENT

ಏಗನೂರು ಗ್ರಾಮ ಸ್ಥಳಾಂತರಕ್ಕೆ ನಿರ್ಣಯ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 11:47 IST
Last Updated 5 ಸೆಪ್ಟೆಂಬರ್ 2021, 11:47 IST
ಶಕ್ತಿನಗರ ಬಳಿಯ ಏಗನೂರು ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಭಾನುವಾರ ಗ್ರಾಮಸಭೆ ನಡೆಯಿತು
ಶಕ್ತಿನಗರ ಬಳಿಯ ಏಗನೂರು ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಭಾನುವಾರ ಗ್ರಾಮಸಭೆ ನಡೆಯಿತು   

ಏಗನೂರು (ಶಕ್ತಿನಗರ): ವಿಮಾನ ಹಾರಾಟ ಮತ್ತು ವಿದ್ಯುತ್‌ ಉತ್ಪಾದನಾ ಘಟಕಗಳ ಶಬ್ದದಿಂದ ತೊಂದರೆಯನ್ನು ತಪ್ಪಿಸಲು ಗ್ರಾಮ ಸ್ಥಳಾಂತರಕ್ಕೆ ಏಗನೂರು ಗ್ರಾಮಸ್ಥರು ಭಾನುವಾರ ನಡೆದ ಗ್ರಾಮಸಭೆಯಲ್ಲಿ ನಿರ್ಣಯ ತೆಗೆದುಕೊಂಡರು.

ವೈಟಿಪಿಎಸ್‌ ವಿದ್ಯುತ್‌ ಉತ್ಪಾದನಾ ಘಟಕಗಳ ನಿರ್ಮಾಣಕ್ಕಾಗಿ ಏಗನೂರು ಗ್ರಾಮವನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಸೂಚನೆ ನೀಡಿತ್ತು. ಕಾರಣಾಂತರಗಳಿಂದ ಗ್ರಾಮವನ್ನು ಸ್ಥಳಾಂತರಿಸಲು ಗ್ರಾಮಸ್ಥರು ಹಿಂದೇಟು ಹಾಕಿದರು.

ಈಗ, ಏಗನೂರು ಸೀಮಾಂತರದ ಜಮೀನುಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸರ್ಕಾರ ನಿರ್ಣಯ ತೆಗೆದುಕೊಂಡಿದೆ. ಈಗಾಗಿ, ವಿಮಾನ ಹಾರಾಟ ಮತ್ತು ವಿದ್ಯುತ್‌ ಉತ್ಪಾದನಾ ಘಟಕಗಳ ಶಬ್ದದಿಂದ ತೊಂದರೆಯನ್ನು ತಪ್ಪಿಸಲು ಗ್ರಾಮವನ್ನು ತೊರೆಯಲು ನಿರ್ಣಯ ಕೈಗೊಳ್ಳಲಾಗಿದೆ. ಯರಮರಸ್‌ ಕ್ಯಾಂಪ್‌ ಹತ್ತಿರ ಕೆಐಎಡಿಬಿ ಜಾಗ ಇದೆ. ಆ ಸ್ಥಳದಲ್ಲಿ ಸೂಕ್ತ ಮೂಲಸೌಲಭ್ಯಗಳೊಂದಿಗೆ ಪುನರ್ವಸತಿ ಕೇಂದ್ರ ನಿರ್ಮಿಸಿ, ಜನರಿಗೆ ವಾಸಿಸಲು ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಾಯ ಮಾಡಲಾಗುವುದು ಎನ್ನುತ್ತಾರೆ ಗ್ರಾಮದ ಮುಖಂಡ ರಾಮನಗೌಡ.

ADVERTISEMENT

ರಾಜೀವಗಾಂಧಿ ವಸತಿ ಯೋಜನೆಗೆ ಮೀಸಲಿಟ್ಟ ಏಗನೂರು ಸೀಮಾಂತರದ ಸರ್ವೆ ನಂಬರ್ 201, 202 ಮತ್ತು 203 ರ ಜಮೀನುಗಳಲ್ಲಿ ಸೌಳು ಇದೆ. ಅಲ್ಲಿ ಗುಣಮಟ್ಟದ ಮನೆಗಳನ್ನು ನಿರ್ಮಿಸಲು ಅಸಾಧ್ಯ. ಈಗಾಗಿ ರಾಜೀವಗಾಂಧಿ ವಸತಿ ಯೋಜನೆ ಅಡಿ ಮನೆಗಳನ್ನು ನಿರ್ಮಿಸಲು ಜಿಲ್ಲಾಡಳಿತ ಕೈ ಬಿಡಬೇಕು.

ವಿಮಾನ ನಿಲ್ದಾಣಕ್ಕೆ ಏಗನೂರು ವಿಮಾನ ನಿಲ್ದಾಣ ನಾಮಕಾರಣ ಮಾಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಾದಯಾತ್ರೆಯೊಂದಿಗೆ ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಗ್ರಾಮದ ಹಿರಿಯ ಮುಖಂಡ ಕೆ.ಸತ್ಯನಾರಾಯಣ ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ ಏಗನೂರು, ಅನಿಲ ನಾಯಕ, ಸೂಗಮ್ಮ, ಹನುಮಂತಿ, ಮುಖಂಡರಾದ ಮಲ್ಲಿಕಾರ್ಜುನ ಏಗನೂರು, ವೀರಗಂಗಾಧರ, ಮಹಾದೇವ, ವಿಶ್ವನಾಥ, ವೆಂಕಟೇಶ ಮತ್ತಿತ್ತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.