ರಾಯಚೂರು: ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 28 ಮೀನುಗಾರರಿಗೆ ಸಲಕರಣೆ ಕಿಟ್, ಲೈಫ್ ಜಾಕೆಟ್ ಹಾಗೂ ಮತ್ಸಾಶ್ರಯ ಯೋಜನೆಯ 25 ಫಲಾನುಭವಿಗಳಿಗೆ ಮನೆಗಳನ್ನು ಮಂಜೂರು ಮಾಡಿದ ಕಾರ್ಯಾದೇಶ ಪತ್ರವನ್ನು ಬುಧವಾರ ಇಲ್ಲಿನ ಶಾಸಕರ ಕಚೇರಿಯಲ್ಲಿ ಶಾಸಕ ಬಸನಗೌಡ ದದ್ದಲ್ ವಿತರಿಸಿದರು.
ನಂತರ ಮಾತನಾಡಿ, ‘ಗ್ರಾಮೀಣ ಕ್ಷೇತ್ರದ ಬಡ ರೈತರು ಹಾಗೂ ಮೀನುಗಾರರು ಸರ್ಕಾರದಿಂದ ನೀಡುವ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಮೀನುಗಾರಿಕೆ ಸಮಯದಲ್ಲಿ ಲೈಫ್ ಜಾಕೆಟ್ ಧರಿಸಿ ಜಾಗೂರುಕರಾಗಿ ಕೆಲಸ ನಿರ್ವಹಿಸಬೇಕು’ ಎಂದು ಹೇಳಿದರು.
‘ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಗಂಗಾಕಲ್ಯಾಣ ಯೋಜನೆಯಡಿ ಆಯ್ಕೆಯಾದ 31 ಫಲಾನುಭವಿಗಳಿಗೆ ಪಂಪ್ ಮೋಟಾರ್ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ’ ಎಂದರು.
ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಸನಗೌಡ, ವಾಲ್ಮೀಕಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರಕಾಶ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ತಲೆಮಾರಿ, ಕಾಂಗ್ರೆಸ್ ಮುಖಂಡರಾದ ನಾಗೇಂದ್ರಪ್ಪ ಮಟಮಾರಿ, ವಕೀಲ ಮಲ್ಲಿಕಾರ್ಜುನ, ಶ್ರೀನಿವಾಸರೆಡ್ಡಿ, ಸೈಯದ್ಸಾಬ್, ರಾಜಶೇಖರ, ಪಂಪಾಪತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.