ADVERTISEMENT

ವಸ್ತುನಿಷ್ಠ ಆರ್ಥಿಕ ಗಣತಿಗೆ ಸೂಚನೆ

ತಾಲ್ಲೂಕು ಮಟ್ಟದ ಗಣತಿದಾರರಿಗೆ, ಮೇಲ್ವಿಚಾರಕರಿಗೆ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 17:30 IST
Last Updated 11 ನವೆಂಬರ್ 2019, 17:30 IST
ರಾಯಚೂರಿನಲ್ಲಿ ಸೋಮವಾರ ಏರ್ಪಡಿಸಿದ್ದ 7ನೇ ಆರ್ಥಿಕ ಗಣತಿ ಅಂಗವಾಗಿ ತಾಲ್ಲೂಕು ಮಟ್ಟದ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಗಾರದಲ್ಲಿ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಲಾಯಿತು
ರಾಯಚೂರಿನಲ್ಲಿ ಸೋಮವಾರ ಏರ್ಪಡಿಸಿದ್ದ 7ನೇ ಆರ್ಥಿಕ ಗಣತಿ ಅಂಗವಾಗಿ ತಾಲ್ಲೂಕು ಮಟ್ಟದ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಗಾರದಲ್ಲಿ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಲಾಯಿತು   

ರಾಯಚೂರು: ವಸ್ತುಸ್ಥಿತಿ ಅರಿಯಲು ಆರ್ಥಿಕ ಗಣತಿ ಬಹುಮುಖ್ಯ ಪಾತ್ರ ವಹಿಸುವುದರಿಂದ ಅದನ್ನು ಪಾರದರ್ಶಕವಾಗಿ ಹಾಗೂ ವಸ್ತುನಿಷ್ಠವಾಗಿ ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ ಸೂಚಿಸಿದರು.

ಇಲ್ಲಿನ ಜವಾಹರ ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿಸೋಮವಾರ ಏರ್ಪಡಿಸಿದ್ದ 7ನೇ ಆರ್ಥಿಕ ಗಣತಿ ಅಂಗವಾಗಿ ತಾಲ್ಲೂಕು ಮಟ್ಟದ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.

ಸರ್ಕಾರಿ, ಅರೆ ಸರ್ಕಾರಿ, ಸಾರ್ವಜನಿಕ, ಖಾಸಗಿ ವಲಯಗಳಲ್ಲಿ ಸಂಘಟಿತ ಹಾಗೂ ಅಸಂಘಟಿತ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ದಿಮೆದಾರರ ಆರ್ಥಿಕ ಸ್ಥಿತಿಗತಿಗಳನ್ನು ಅರಿತು, ಅದರ ಆಧಾರದ ಮೇಲೆ ಯಾವ ಯೋಜನೆಗಳನ್ನು ಜಾರಿಗೊಳಿಸಬೇಕು ಎಂಬ ವರದಿಯನ್ನು ಕೇಂದ್ರ ಸಾಂಖ್ಯಿಕ ಹಾಗೂ ಆರ್ಥಿಕ ಮಂತ್ರಾಲಯದೊಂದಿಗೆ ಸಲ್ಲಿಸಬೇಕಿರುತ್ತದೆ. ಈ ಗಣತಿ ಅತೀ ಮಹತ್ವ ಪಡೆದಿದೆ ಎಂದರು.

ADVERTISEMENT

ಜಾನುವಾರು ಗಣತಿ, ಸಾಮಾಜಿಕ ಗಣತಿ ಹೀಗೆ ಹಲವಾರು ಗಣತಿಗಳನ್ನು ಕೈಗೊಳ್ಳಲಾಗುತ್ತದೆ. ಅದರಲ್ಲಿ ಇದು ಆರ್ಥಿಕ ಗಣತಿಯೂ ಸಹ ಒಂದು. ಜಿಲ್ಲೆಯಲ್ಲಿ ಬಹಳಷ್ಟು ಸಾಮಾನ್ಯ ಸೇವಾ ಕೇಂದ್ರಗಳಿವೆ. ಇವುಗಳ ಸದುಪಯೋಗವಾಗಬೇಕು. ಈ ಗಣತಿ ಮಾಡಲು ಸಾಮಾನ್ಯ ಸೇವಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದು ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕಾಗಿದೆ ಎಂದು ತಿಳಿಸಿದರು.

ಗಣತಿದಾರರು ಪ್ರತಿಯೊಂದು ಕುಟುಂಬ ಮುಖ್ಯಸ್ಥರಿಂದ ಮಾಹಿತಿ ಸಂಗ್ರಹಿಸಬೇಕು. ಎಲ್ಲರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಈ ಎಲ್ಲ ಕಾರ್ಯಗಳು ವಸ್ತುನಿಷ್ಠವಾಗಿ ನಡೆಯಬೇಕಾಗಿದೆ. ಜಿಲ್ಲೆಯ ಪ್ರಗತಿಯಲ್ಲಿ ಹೆಚ್ಚು ಕಾಳಜಿ ವಹಿಸಿ ಅಭಿವೃದ್ಧಿಪರ ಕಾರ್ಯಗಳನ್ನು ನಡೆಸಬೇಕಾಗಿದೆ ಎಂದು ಹೇಳಿದರು.

ಗಣತಿ ಮಾಡುವ ಸಂದರ್ಭದಲ್ಲಿ ಸಮಸ್ಯೆಗಳು ಬಂದಾಗ ಯಾವ ರೀತಿ ಪರಿಹರಿಸಬೇಕು ಎನ್ನುವ ಡೆಮೋ ಆ್ಯಪ್‌ ಬಿಡುಗಡೆಗೊಳಿಸಲಾಯಿತು.

ರಾಷ್ಟ್ರೀಯ ಮಾದರಿ ಸಮೀಕ್ಷೆ ತರಬೇತಿ ಅಧಿಕಾರಿಗಳಾದ ನಾಗರಾಜ, ಚನ್ನಬಸವ ಶಾಸ್ತ್ರಿಗಳು, ಜಿಲ್ಲಾ ಸಾಂಖ್ಯಿಕ ಅಧಿಕಾರಿ ತಿಪ್ಪಣ್ಣ ನಾಯಕ್, ನಗರಸಭೆ ಅಧಿಕಾರಿ ವಿಜಯಲಕ್ಷ್ಮೀ, ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕರಾದ ಮಹಮ್ಮದ್ ನಾಜೀಮುದ್ದೀನ್, ಶ್ರೀನಿವಾಸ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ತಾಲ್ಲೂಕು ಮಟ್ಟದ ಗಣತಿದಾರರು ಹಾಗೂ ಮೇಲ್ವಿಚಾರಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.