ADVERTISEMENT

‘ಹಸಿರು ಸಿಂಧನೂರು ನಿರ್ಮಾಣಕ್ಕೆ ಕೈಜೋಡಿಸಿ’

​ಪ್ರಜಾವಾಣಿ ವಾರ್ತೆ
Published 6 ಜೂನ್ 2023, 13:57 IST
Last Updated 6 ಜೂನ್ 2023, 13:57 IST
ಸಿಂಧನೂರಿನ ನಗರಸಭೆಯ ಕಚೇರಿಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸೋಮವಾರ ಸಸಿಗಳ ನೆಡುವ ಕಾರ್ಯಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಚಾಲನೆ ನೀಡಿದರು
ಸಿಂಧನೂರಿನ ನಗರಸಭೆಯ ಕಚೇರಿಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸೋಮವಾರ ಸಸಿಗಳ ನೆಡುವ ಕಾರ್ಯಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಚಾಲನೆ ನೀಡಿದರು   

ಸಿಂಧನೂರು: ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡುವ ಮೂಲಕ ಹಸಿರು ಸಿಂಧನೂರು ನಗರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಕರೆ ನೀಡಿದರು.

ನಗರಸಭೆಯ ಕಚೇರಿಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸೋಮವಾರ ಸಸಿಗಳ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಅನೇಕ ಸಂಘ-ಸಂಸ್ಥೆಗಳ ಪ್ರಯತ್ನದಿಂದ ಸಿಂಧನೂರು ನಗರದ ಹಸಿರು ನಗರವಾಗಿ ರಾಜ್ಯದಲ್ಲಿಯೇ ಎಲ್ಲರ ಗಮನ ಸೆಳೆಯುತ್ತಿರುವುದು ಉತ್ತಮ ಬೆಳವಣಿಗೆ ಮತ್ತು ಸಂತಸದಾಯಕವಾಗಿದೆ. ಪರಿಸರ ಸಂರಕ್ಷಣೆ ಜೊತೆಗೆ ಜನಜಾಗೃತಿ ಮೂಡಿಸಿದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪುರ ಅವರಿಗೆ ರಾಜ್ಯ ಸರ್ಕಾರದಿಂದ ಕರ್ನಾಟಕ ಪರಿಸರ ರತ್ನ ಪ್ರಶಸ್ತಿ ಲಭಿಸಿರುವುದು ತಾಲ್ಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ’ ಎಂದರು.

ADVERTISEMENT

ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಮಾತನಾಡಿ ‘ನಗರಸಭೆ ಈಗಾಗಲೇ ಆರ್‌ಆರ್‌ಆರ್ ಎನ್ನುವ ಐದು ಕೇಂದ್ರಗಳನ್ನು ತೆರೆದಿದ್ದು, ಅವುಗಳ ಬಳಕೆಯನ್ನು ಸಾರ್ವಜನಿಕರು ಮಾಡಬೇಕು. ಮನೆಯ ತ್ಯಾಜ್ಯವನ್ನು ಹಸಿ ಹಾಗೂ ಒಣ ಕಸವೆಂದು ಬೇರ್ಪಡಿಸಿ ವಿತರಿಸಬೇಕು. ಸ್ವಚ್ಛ, ಸದೃಢ, ಆರೋಗ್ಯಯುತ ಸಿಂಧನೂರಿಗಾಗಿ ನಗರಸಭೆಯೊಂದಿಗೆ ಕೈಜೋಡಿಸಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊಡೆದೊಡಿಸಿ ಉತ್ತಮ ಪರಿಸರ ಕಾಪಾಡಬೇಕು. ಪರಿಸರಕ್ಕೆ ಪೂರಕವಾದ ಬಟ್ಟೆ ಕೈಚೀಲ ಬಳಸಬೇಕು. ಎಲ್ಲ ವ್ಯಾಪಾರಿಗಳು ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು. ಒಂದು ವೇಳೆ ಪ್ಲಾಸ್ಟಿಕ್ ಬಳಸಿದರೆ ನಗರಸಭೆಯಿಂದ ದಂಡ ವಿಧಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಲಕ್ಷ್ಮಿದೇವಿ ಸಣ್ಣತಿಮ್ಮಯ್ಯ ಭಂಗಿ, ಸದಸ್ಯರಾದ ಮುನೀರ್‍ಪಾಷಾ, ಕೆ.ಜಿಲಾನಿಪಾಷಾ, ಚಂದ್ರಶೇಖರ ಮೈಲಾರ, ನಗರಸಭೆಯ ಎಇಇ ಮಹೇಶ, ಆರೋಗ್ಯ ಮತ್ತು ನೈರ್ಮಗ್ಯ ವಿಭಾಗದ ಹಿರಿಯ ನಿರೀಕ್ಷಕರಾದ ಕಿಶನ್‍ರಾವ್, ಲಕ್ಷ್ಮಿಪತಿ, ಜೆಇ ಶಾಂತಕುಮಾರ, ಕಿರಿಯ ನಿರೀಕ್ಷಕರಾದ ಸುಧಾ ಹಿರೇಮಠ, ರೇಖಾ ಹಾಗೂ ಪೌರ ಕಾರ್ಮಿಕ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.