ಸಿಂಧನೂರು: ‘ವಿದ್ಯಾರ್ಥಿಗಳು ಉನ್ನತ ಗುರಿ ಇಟ್ಟುಕೊಂಡು ಸತತ ಅಭ್ಯಾಸ ಮಾಡಿದರೆ ಯಶಸ್ಸು ಸಾಧ್ಯ’ ಎಂದು ಕಲಬುರಗಿಯ ವಿಕಾಸ ಅಕಾಡೆಮಿಯ ಸಂಪನ್ಮೂಲ ವ್ಯಕ್ತಿ ಲೀಲಾ ಮಲ್ಲಿಕಾರ್ಜುನ ಹೇಳಿದರು.
ನಗರದ ಎನ್.ಎಸ್.ಕಾಂಪ್ಲೆಕ್ಸ್ನಲ್ಲಿ ಬಣಜಿಗ ಸಮಾಜದ ತಾಲ್ಲೂಕು ಹಾಗೂ ಯುವ ಘಟಕದ ವತಿಯಿಂದ ಭಾನುವಾರ ನಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಕಾಲಹರಣ ಮಾಡಬಾರದು. ಸತತ ಪರಿಶ್ರಮದ ಕಡೆಗೆ ಒಲವು ತೋರಿದರೆ ಮಾತ್ರ ನಾವು ಉನ್ನತ ಸ್ಥಾನಕ್ಕೆ ಏರಲು ಸಾಧ್ಯ ಎಂದರು.
ಬಣಜಿಗ ಸಮುದಾಯ ತನ್ನದೇ ಆದ ವಿಶಿಷ್ಟತೆ ಹೊಂದಿದೆ. ಮೊದಲಿನಿಂದಲೂ ವ್ಯಾಪಾರ ಸ್ಥರಾಗಿದ್ದಾರೆ. ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಇಂಥ ಸಮುದಾಯದ ಯುವಕರು, ಯುವತಿಯರು ಶಿಕ್ಷಣದ ಕಡೆಗೆ ಹೆಚ್ಚು ಗಮನಹರಿಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾಜದ ಮುಖಂಡ ಸಿದ್ದರಾಮಪ್ಪ ಸಾಹುಕಾರ್ ಮಾಡ ಸಿರವಾರ ಮಾತನಾಡಿ,‘ಸಮಾಜದ ಬೆಳವಣಿಗೆ ಹಾಗೂ ಸಂಘಟನೆಗೆ ಪ್ರತಿಯೊಬ್ಬರ ಸಹಾಯ, ಸಹಕಾರ ಅಗತ್ಯ. ಆ ನಿಟ್ಟಿನಲ್ಲಿ ನಾವು ಸಂಘಟಿತರಾಗಬೇಕು. ಆಗ ಮಾತ್ರ ನಮ್ಮ ಸಮುದಾಯ ಬೆಳೆಯಲು ಸಾಧ್ಯ’ ಎಂದರು.
ಮುಖಂಡರ ಡಾ.ನಾಗರಾಜ್ ಮಾಲಿಪಾಟೀಲ, ಸಮಾಜದ ಅಧ್ಯಕ್ಷ ಲಿಂಗಪ್ಪ ದಢೇಸೂಗೂರು, ಯುವ ಘಟಕದ ಅಧ್ಯಕ್ಷ ಚಂದ್ರಶೇಖರ ಯರದಿಹಾಳ, ಮಹಾಸಭಾದ ಅಧ್ಯಕ್ಷ ಶಿವಕುಮಾರ ಜವಳಿ, ಶಿಕ್ಷಕರಾದ ವಿ.ಹವಾಲ್ದಾರ್, ಗಿರಿಜಮ್ಮ, ಬಸವರಾಜ ಅಂಗಡಿ, ಸಂತೋಷ ಅಂಗಡಿ ಹಾಗೂ ಶರಣಪ್ಪ ಮಾಲಿಪಾಟೀಲ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಸಮಾಜದ ಮಾಜಿ ಅಧ್ಯಕ್ಷ ಬಸವರಾಜಪ್ಪ, ಗುಂಡಪ್ಪ ಬಳಿಗಾರ, ಸಮಾಜದ ಮಸ್ಕಿ ಘಟಕದ ಅಧ್ಯಕ್ಷ ಉಮಾಕಾಂತಪ್ಪ ಸಂಗನಾಳ, ಆದಪ್ಪ ಸಾಹುಕಾರ್,ಮಲ್ಲೇಶಪ್ಪ ಸಾಹುಕಾರ್ ಮುಕ್ಕುಂದಿ, ಶಾಂತಪ್ಪ ಚಿಂಚಿರಿಕೆ, ಶರಣಬಸವ ವಕೀಲ, ಜಗದೀಶ ಸಾಹುಕಾರ್, ನಂದಿನಿ ವೀರೇಂದ್ರ ಪ್ರಸಾದ್, ಎನ್.ಅಮರೇಶ, ಅಮರೇಶ ಮಾಡಸಿರವಾರ ಹಾಗೂ ಸೂಗಪ್ಪ ಸೌದ್ರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.