ರಾಯಚೂರು: ‘ಸಾರ್ವಜನಿಕ ಸ್ಥಳ, ಕೆರೆಯಲ್ಲಿ ಕಸ ಎಸೆಯುವುದನ್ನು ನಿಲ್ಲಿಸದಿದ್ದರೆ ಹಾಗೂ ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದಿದ್ದರೆ ದಂಡ ವಿಧಿಸುವುದು ಅನಿವಾರ್ಯವಾಗಲಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಎಚ್ಚರಿಕೆ ನೀಡಿದ್ದಾರೆ.
‘ಸರ್ಕಾರದ ಸೂಚನೆಯಂತೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ನಿಗದಿಪಡಿಸಿದ ಶುಲ್ಕ ಹಾಗೂ ದಂಡ ಅಂಗೀಕರಿಸಲಾಗುವುದು’ ಎಂದು ಹೇಳಿದ್ದಾರೆ.
‘ಸಾರ್ವಜನಿಕರು ತಮ್ಮ ಮನೆ, ಅಂಗಡಿ, ಮಳಿಗೆಗಳಲ್ಲೇ ತ್ಯಾಜ್ಯ ವಿಲೇವಾರಿ ಮಾಡಿ ಸಂಗ್ರಹ ವಾಹನಗಳಿಗೆ ಕೊಡಬೇಕು. ರಸ್ತೆ, ಕಂದಕ ಅಥವಾ ರಾಜಕಾಲುವೆಗಳಲ್ಲಿ ಕಸ ಹಾಕುವುದು ಕಂಡುಬಂದರೆ ₹ 500 ದಂಡ ವಿಧಿಸಲಾಗುವುದು’ ಎಂದು ತಿಳಿಸಿದ್ದಾರೆ.
‘ವಾಣಿಜ್ಯ ಆಸ್ತಿಗಳು, ಬಾರ್ಗಳು, ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳವರು ರಸ್ತೆಗಳು, ಉದ್ಯಾನ, ಜಲಮೂಲಗಳಲ್ಲಿ ಕಸ ಎಸೆಯುವುದು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯವನ್ನು ಸುಡುವುದು ಕಂಡುಬಂದರೆ ₹1,500 ದಂಡ ವಿಧಿಸಲಾಗುವುದು. ರಾಯಚೂರು ನಗರವನ್ನು ಸುಂದರ ಮತ್ತು ಆರೋಗ್ಯಕರ ನಗರವನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.