ರಾಯಚೂರು: ಮೀನು ಒಂದು ಅತ್ಯುತ್ತಮವಾದ ಆಹಾರವಾಗಿದೆ. ಇದನ್ನು ಸೇವಿಸುವುದರಿಂದ ಅಪೌಷ್ಟಿಕತೆಯನ್ನು ನಿವಾರಣೆ ಮಾಡಬಹುದು ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶ ಡಾ. ಎಂ.ಕೆ. ನಾಯ್ಕ ಹೇಳಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮುಖ್ಯ ಕೃಷಿ ಸಂಶೋಧನಾ ಕೇಂದ್ರ, ಒಳನಾಡು ಮೀನುಗಾರಿಕಾ ವಿಭಾಗದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮತ್ತು ಹೈದರಾಬಾದ್ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ದಿ ಮಂಡಳಿಯಿಂದ ಶಿಬಿರಾರ್ಥಿಗಳಿಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಮೀನುಗಾರಿಕಾ ಕೌಶಲ್ಯ ಅಭಿವೃದ್ದಿ ತರಬೇತಿ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.
ಮೀನು ತಿನ್ನುವುದರಿಂದ ಹೃದಯಕ್ಕೆ ಸಂಬಂಧಿಸಿದ ರೋಗಗಳನ್ನುಕೂಡಾ ಗುಣ ಪಡಿಸಬಹುದು. ಮೀನಿನಿಂದ ಆರೋಗ್ಯ ವೃದ್ದಿಸುವುದಲ್ಲದೆ, ಹೆಚ್ಚು ಹೆಚ್ಚು ಲಾಭವನ್ನು ಮಾಡಬಹುದು ಎಂದು ರೈತರಿಗೆ ತಿಳಿಸಿದರು.
ಹಸಿರು ಕ್ರಾಂತಿ, ಬಿಳಿ ಕ್ರಾಂತಿಯಂತೆ ನೀಲಿ ಕ್ರಾಂತಿಯು ಈಗ ಮುಂಚೂಣಿಯಲ್ಲಿದೆ. 2021-22 ರ ಸಾಲಿನಲ್ಲಿ ಭಾರತವು ಶೇ 40 ರಷ್ಟು ನೈಸರ್ಗಿಕ ಸಂಪನ್ಮೂಲವನ್ನು ಬಳಸಿ ಪ್ರಪಂಚದಲ್ಲಿಯೇ ಮೂರನೆ ಸ್ಥಾನದಲ್ಲಿದೆ. ಎಲ್ಲರೂ ಮೀನು ಕೃಷಿಯನ್ನು ವೈಜ್ಞಾನಿಕವಾಗಿ ಮಾಡಿದರೆ, ಮುಂದೊಂದು ದಿನ ಭಾರತವು ಪ್ರಪಂಚದಲ್ಲಿ ಎರಡನೆ ಸ್ಥಾನವನ್ನು ಪಡೆಯುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಜಿಲ್ಲಾ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶರಣಬಸವ ಮಾತನಾಡಿ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ, ಸಾಮಾನ್ಯ ಅಭ್ಯರ್ಥಿಗಳಿಗೆ ಶೇ 40 ರಷ್ಟು, ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹಾಗೂ ಎಲ್ಲಾ ಮಹಿಳೆಯರಿಗೆ ಶೇ 60 ಧನ ಸಹಾಯವು ಮೀನುಗಾರಿಕೆಯ ಎಲ್ಲಾ ಚಟುವಟಿಕೆಗಳಿಗೆ ದೊರೆಯುತ್ತದೆ ಎಂದು ವಿವರಿಸಿದರು.
ಎಲ್ಲಾ ರೈತರು ಮೀನು ಕೃಷಿಯನ್ನು ವೈಜ್ಞಾನಿಕವಾಗಿ ಮಾಡಿದರೆ ಹೆಚ್ಚು ಲಾಭ ಮಾಡಬಹುದು. ಅಲ್ಲದೆ, ಮೀನುಗಾರಿಕೆ ಇಲಾಖೆಯ ಯೋಜನೆಗಳ ಲಾಭವನ್ನು ಪಡೆಯಬಹುದು ಎಂದು ತಿಳಿಸಿದರು.
ಮುಖ್ಯ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಹೂಗಾರ ಅವರು ಮೀನು ಕೃಷಿಯನ್ನು ಮಾಡುವುದರಿಂದ ಹೆಚ್ಚು ಹೆಚ್ಚು ಲಾಭವನ್ನು ಮಾಡಬಹುದು ಎಂದು ರೈತರಿಗೆ ತಿಳಿಸಿದರು.
ಪ್ರಾಧ್ಯಾಪಕರಾದ ಡಾ. ಎ. ಸಿ. ಸುಧಾಕರ್, ಡಾ. ಪ್ರದೀಪ್ ದೊಡ್ಡಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.