
ಲಿಂಗಸುಗೂರು: ತಾಲ್ಲೂಕಿನ ಜಾಗೀರನಂದಿಹಾಳ ಗ್ರಾಮದ ಹತ್ತಿರ ಹಳ್ಳ ದಾಟಿ ಜಮೀನಿಗೆ ತೆರಳುತ್ತಿದ್ದ ವ್ಯಕ್ತಿ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಸ್ಥಳದಲ್ಲಿದ್ದ ಗ್ರಾಮಸ್ಥರು ಹಗ್ಗ ಎಸೆದು ಆತನನ್ನು ರಕ್ಷಣೆ ಮಾಡಿದ್ದಾರೆ.
ಸತತ ಮಳೆ ಹಾಗೂ ರಾಂಪುರ ಏತ ನೀರಾವರಿ ಕಾಲುವೆ ನೀರು ಏಕಾಏಕಿ ಹೊಲದೊಳಗೆ ನುಗ್ಗಿದೆ. ಇದನ್ನು ನೋಡಲು ಹೋದ ಬಂಡೆಪ್ಪ ಅವರು ನೀರಿನ ರಭಸಕ್ಕೆ ಸಿಲುಕಿ ಹರಿದು ಹೋಗುತ್ತಿದ್ದರು. ಹಳ್ಳ ಭರ್ತಿಯಾಗಿ ಹರಿಯುತ್ತಿದ್ದರಿಂದ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೊಲಗಳಿಗೆ ತೆರಳಲು ರೈತರಿಗೆ, ಆನಾಹೊಸೂರು, ಲಿಂಗಸುಗೂರು ಪಟ್ಟಣದಲ್ಲಿ ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ಸೇತುವೆ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದ್ದರಿಂದ ಗ್ರಾಮಸ್ಥರು ನಿತ್ಯವೂ ಸಮಸ್ಯೆ ಎದುರಿಸುವಂತಾಗಿದೆ. ಶೀಘ್ರ ಸೇತುವೆ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮದ ಮುಖಂಡ ಗದ್ದೆನಗೌಡ ಪಾಟೀಲ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.