ADVERTISEMENT

ಹಾರುಬೂದಿ ವಿಲೇವಾರಿಗೆ ಬಿಗಿ ಕ್ರಮ: ಪೊನ್ನುರಾಜ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 6:01 IST
Last Updated 18 ಜುಲೈ 2019, 6:01 IST
ವಿ.ಪೊನ್ನುರಾಜ
ವಿ.ಪೊನ್ನುರಾಜ   

ಶಕ್ತಿನಗರ (ರಾಯಚೂರು): ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್‌)ದ ಹಾರುಬೂದಿಯನ್ನು ಸಂಪೂರ್ಣ ವಿಲೇವಾರಿಗೊಳಿಸಲು ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿಎಲ್‌)ದ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಶೇ 70 ರಷ್ಟು ಹಾರುಬೂದಿ ವಿಲೇವಾರಿಗೆ ಯಾವುದೇ ಸಮಸ್ಯೆಯಿಲ್ಲ. ಶೇ 30 ರಷ್ಟು ತೊಯ್ದ ಹಾರುಬೂದಿಗೂ ಸಾಕಷ್ಟು ಬೇಡಿಕೆ ಇದ್ದು, ಸ್ಥಳೀಯ ಕೈಗಾರಿಕೆಗಳು ಸಮರ್ಪಕವಾಗಿ ಬಳಸಿಕೊಳ್ಳುವ ತಂತ್ರಜ್ಞಾನ ಅಳವಡಿಸಿಕೊಂಡಿರುವುದನ್ನು ಪರಿಶೀಲಿಸಿದ ಬಳಿಕ ಹಂಚಿಕೆ ಮಾಡಲಾಗುವುದು. ಹಾರುಬೂದಿ ಬಳಸಿಕೊಳ್ಳುವ ತಂತ್ರಜ್ಞಾನ ಇಲ್ಲದಿದ್ದರೆ ಅದನ್ನು ಸಿಮೆಂಟ್‌ ಕಂಪೆನಿಗಳಿಗೆ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.

ಸ್ಥಾವರಗಳಿಂದ ಹೊರಬರುವ ತೊಯ್ದ ಹಾರುಬೂದಿಯನ್ನು ನೀರಿನಿಂದ ಪ್ರತ್ಯೇಕಗೊಳಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳುವ ಯೋಜನೆ ಇದೆ. ಶೀಘ್ರದಲ್ಲಿಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಹಾರುಬೂದಿಯಿಂದ ಜನರಿಗೆ ಯಾವುದೇ ಆರೋಗ್ಯದ ಸಮಸ್ಯೆಯಾಗದಂತೆ ಕ್ರಮ ಜರುಗಿಸಲಾಗುವುದು ಎಂದರು.

ADVERTISEMENT

ವೈಟಿಪಿಎಸ್‌ನಲ್ಲಿ ಕೆಲವು ತಾಂತ್ರಿಕ ಅಡಚಣೆಗಳಿವೆ. ಒಂದು ತಿಂಗಳಲ್ಲಿ ಯುನಿಟ್‌–1 ಕಾರ್ಯಾರಂಭಿಸಲಾಗುವುದು. ಪವರ್‌ ಮೇಕಿಂಗ್‌ ಕಂಪೆನಿಯ ಸಹಯೋಗದಲ್ಲಿಯೇ ಅದನ್ನು ನಿರ್ವಹಣೆ ಮಾಡಲಾಗುವುದು. ಉದ್ಯೋಗ ಒದಗಿಸುವುದರಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು. ಈಗಾಗಲೇ ಕೆಲವು ದಾಖಲೆಗಳ ಸಂಗ್ರಹ ಮಾಡಿಕೊಳ್ಳಲಾಗಿದೆ. ಕೆಲವರು ಇನ್ನೂ ದಾಖಲೆಗಳನ್ನು ಒದಗಿಸುವುದು ಬಾಕಿ ಇದೆ ಎಂದು ಹೇಳಿದರು.

ವಿದ್ಯುತ್‌ ಸರಬರಾಜು ಕಂಪೆನಿಗಳಿಂದ ಸಾಕಷ್ಟು ಬಾಕಿ ಬರಬೇಕಿದೆ. ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.