ADVERTISEMENT

‘ಸಮಾಜದ ಅಭಿವೃದ್ಧಿಗೆ ಒಗ್ಗಟ್ಟು ಅವಶ್ಯ’

ರಾಜ್ಯ ನದಾಫ್, ಪಿಂಜಾರ ಸಂಘದ ರಜತ ಮಹೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 3:37 IST
Last Updated 25 ಅಕ್ಟೋಬರ್ 2021, 3:37 IST
ಮಾನ್ವಿಯಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ನದಾಫ್, ಪಿಂಜಾರ ಸಂಘದ ರಜತ ಮಹೋತ್ಸವ ಸಮಾರಂಭವನ್ನು ಸಮುದಾಯದ ಗಣ್ಯರು ಉದ್ಘಾಟಿಸಿದರು
ಮಾನ್ವಿಯಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ನದಾಫ್, ಪಿಂಜಾರ ಸಂಘದ ರಜತ ಮಹೋತ್ಸವ ಸಮಾರಂಭವನ್ನು ಸಮುದಾಯದ ಗಣ್ಯರು ಉದ್ಘಾಟಿಸಿದರು   

ಮಾನ್ವಿ: ‘ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ನದಾಫ್, ಪಿಂಜಾರ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಒಗ್ಗಟ್ಟು ಹಾಗೂ ಸಂಘಟಿತ ಪ್ರಯತ್ನ ಅವಶ್ಯ’ ಎಂದು ಕರ್ನಾಟಕ ರಾಜ್ಯ ನದಾಫ್‌, ಪಿಂಜಾರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.ಜಲೀಲ್ ಸಾಬ್ ಹೇಳಿದರು.

ಪಟ್ಟಣದ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ನದಾಫ್‌, ಪಿಂಜಾರ ಸಂಘದ ರಜತ ಮಹೋತ್ಸವ ಮತ್ತು ವಿವಿಧ ಘಟಕಗಳ ರಾಜ್ಯಮಟ್ಟದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದ 70 ಲಕ್ಷ ಮುಸ್ಲಿಮರಲ್ಲಿ ನದಾಫ್, ಪಿಂಜಾರ ಸಮುದಾಯದ 28 ಲಕ್ಷ ಜನ ಇದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಮಾಜ ಸಂಘಟನೆಯಾಗಿ ಅಭಿವೃದ್ಧಿಯಾಗಬೇಕು. ಪ್ರತಿಯೊಬ್ಬರು ಸಮಾಜದ ರಾಜ್ಯ ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು. ಸರ್ಕಾರಗಳಿಗೆ ನಮ್ಮ ಒಗ್ಗಟ್ಟು, ಶಕ್ತಿ ಹಾಗೂ ಸಾಮರ್ಥ್ಯಗಳನ್ನು ಪ್ರದರ್ಶಿಸಬೇಕು’ ಎಂದು ಅವರು ಮನವಿ ಮಾಡಿದರು.

ADVERTISEMENT

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ಡಿ.ನದಾಫ್ ಮಾತನಾಡಿ,‘ರಾಜ್ಯದಲ್ಲಿ ನದಾಫ್, ಪಿಂಜಾರ ಸಮುದಾಯದವರು ಬಟ್ಟೆ ನೇಯುವುದು, ಗಾದಿ, ಅಗ್ಗ, ಜಾನುವಾರಗಳ ಕುಣಿಕೆ ಮಾಡುತ್ತ ಬದುಕುತ್ತಿರುವ ಅಲೆಮಾರಿ ಸಮುದಾಯವಾದವರಾಗಿದ್ದಾರೆ. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಮುದಾಯ ಹಿಂದುಳಿದಿದೆ. ಕಾರಣ ರಾಜ್ಯ ಸರ್ಕಾರ ಕೂಡಲೇ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು’ ಎಂದು ಅವರು ಒತ್ತಾಯಿಸಿದರು.

ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿ ಹೊಸ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ರಾಜ್ಯ ಘಟಕದ ಕೋಶಾಧ್ಯಕ್ಷ ಚಂದಾಸಾಹೇಬ್ ಮಾತನಾಡಿದರು.

ರಾಜ್ಯ ಉಪಾಧ್ಯಕ್ಷ ಎಂ.ಜೆ.ನದಾಫ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಸಲೀಂ, ವಿಭಾಗೀಯ ಉಪಾಧ್ಯಕ್ಷ ಮಹ್ಮದ್ ಇಸ್ಮಾಯಿಲ್ ಮಾನ್ವಿ, ಜಿಲ್ಲಾ ಘಟಕದ ಅಧ್ಯಕ್ಷ ಮಹಿಬೂಬ್ ಸಾಬ್ ಎಂಜಿನಿಯರ್, ಮಾನ್ವಿ ತಾಲ್ಲೂಕು ಅಧ್ಯಕ್ಷ ಅಧ್ಯಕ್ಷ ಹಬೀಬ್ ನದಾಫ್, ಸಿರವಾರ ತಾಲ್ಲೂಕು ಅಧ್ಯಕ್ಷ ಮೌಲಾಸಾಬ್ ಗಣದಿನ್ನಿ, ರಾಯಚೂರು ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ, ಬಾಗಲಕೋಟೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಿಯಾನ ಬೇಗಂ, ರಾಜ್ಯ ಮುಖಂಡರಾದ ಪಿ.ಬಿ.ನದಾಫ್, ಶಹಾಬುದ್ದೀನ್ ನೂರ್ ಬಾಷಾ, ಎಚ್.ಶರ್ಫುದ್ದೀನ್ ಪೋತ್ನಾಳ್, ಅಬ್ಬು ಪಟೇಲ್ ಮಾನ್ವಿ, ಸದ್ದಾಂ ಹುಸೇನ್, ನಾಸೀರ್‌ಅಲಿ, ಖಾನ್‌ಸಾಬ್ ಪೋತ್ನಾಳ್, ಶರೀಫ್‌ಸಾಬ್ ಬಾದರದಿನ್ನಿ , ವಿವಿಧೆಡೆಯಿಂದ ಆಗಮಿಸಿದ್ದ ರಾಜ್ಯ ಹಾಗೂ ಜಿಲ್ಲಾ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.