ರಾಯಚೂರು: ಕೋವಿಡ್–19 ಸೋಂಕಿಗೆ ಒಳಗಾಗಿರುವ ಸರ್ಕಾರಿ ಉದ್ಯೋಗಿ ಹಾಗೂ ಅವರ ಕುಟುಂಬಸ್ಥರ ಚಿಕಿತ್ಸೆಗಾಗಿ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಮೀಸಲಿರಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಶನಿವಾರ ಮನವಿ ಸಲ್ಲಿಸಿದರು.
ರಾಜ್ಯದಾದ್ಯಂತ ಕೋವಿಡ್–19 ವ್ಯಾಪಕವಾಗಿ ಹರಡುತ್ತಿರುವ ವಿಷಮ ಪರಿಸ್ಥಿತಿಯಲ್ಲಿ ಕರ್ತವ್ಯ ನಿರತ ನೌಕರರು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ದೈನಂದಿನ ಕಾರ್ಯನಿರ್ವಹಣೆಯಲ್ಲಿ ಕೋವಿಡ್ ಎಸ್ಓಎಸ್ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುತ್ತಿರುವ ಮಧ್ಯೆ ಸೋಂಕಿಗೆ ಒಳಲಾಗುತ್ತಿದ್ದಾರೆ.
ಸೋಂಕಿತರಿಗೆ ಸಕಾಲಕ್ಕೆ ಸೂಕ್ತ ಗುಣಮಟ್ಟದ ಚಿಕಿತ್ಸೆ ದೊರಕಿಸಬೇಕಿದೆ. ಮಂಡ್ಯ ಜಿಲ್ಲಾಡಳಿತ ಸೋಂಕಿತ ಸರ್ಕಾರಿ ನೌಕರರ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಮೀಸಲಿರಿಸಲು ಆದೇಶಿಸಿದ್ದು, ರಾಯಚೂರು ಜಿಲ್ಲಾಡಳಿತವೂ ಪ್ರತ್ಯೇಕ ವಾರ್ಡ್ ರಚಿಸಿ ಗುಣಮಟ್ಟ ಚಿಕಿತ್ಸೆ ನೀಡಿ ನೌಕರರ ಆತ್ಮಸ್ಥೈರ್ಯ ಹೆಚ್ಚಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಮಹೆಬೂಬ್ ಪಾಷಾ ಮೂಲಿಮನಿ ಹಾಗೂ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.