
ದೇವದುರ್ಗ: ತಾಲ್ಲೂಕಿನ ಗಬ್ಬೂರು ಗ್ರಾಮದ ಬೂದಿಬಸವೇಶ್ವರ ಮಹಾ ರಥೋತ್ಸವ ಗುರುವಾರ ಸಂಭ್ರಮದಿಂದ ನೆರವೇರಿತು.
ಸುತ್ತಲಿನ ಗ್ರಾಮಗಳು ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಪೀಠಾಧಿಪತಿ ಬೂದಿಬಸವ ಶಿವಾಚಾರ್ಯರು ಮಠದ ಕರ್ತೃ ಗದ್ದುಗೆಯಿಂದ ಹೊರಟು ಗ್ರಾಮದೊಳಗಿರುವ ಮಠವನ್ನು ತಲುಪಿದರು. ಅಲ್ಲಿಂದ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವದೊಂದಿಗೆ ವಾಪಸಾಗಿ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥಕ್ಕೆ ಎಣ್ಣೆ ಸವರಿ ಹರಕೆ ತೀರಿಸುವುದು ಸಾಮಾನ್ಯವಾಗಿದ್ದು, ಭಕ್ತರು ಬೆಳಿಗ್ಗೆಯಿಂದಲೇ ಹರಕೆ ತೀರಿಸಿದರು. 6 ಚಕ್ರಗಳ ಬೃಹತ್ ರಥವನ್ನು ಮಠದಿಂದ ದೂರದ ಪಾದಗಟ್ಟೆವರೆಗೂ ಎಳೆಯಲಾಯಿತು. ಭಕ್ತರು ರಥದ ಮೇಲೆ ಹಣ್ಣು, ಬರ್ಫಿ ತೂರಿ ಭಕ್ತಿ ಸಮರ್ಪಿಸಿದರು. ರಾಯಚೂರಿನ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ರಾಚೋಟಿ ವೀರ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮತ್ತು ಸುಲ್ತಾನಪುರ ಪಂಚಾಕ್ಷರಿ ಮಠದ ಶಂಭು ಸೋಮೇಶ್ವರ ಸ್ವಾಮೀಜಿ ಭಾಗವಹಿಸಿದ್ದರು.
ಗ್ರಾಮದ ಹಿರಿಯ ಮುಖಂಡರಾದ ಸಾಲಿ ಬೂದಯ್ಯ ಸ್ವಾಮಿ, ಸಾಲಿ ದೊಡ್ಡಬಸಯ್ಯ ಸ್ವಾಮಿ, ಸಾಲಿ ಶರಣಯ್ಯ ಸ್ವಾಮಿ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಮಠಾಧೀಶ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.