ಹಟ್ಟಿ ಚಿನ್ನದ ಗಣಿ: ಒಟಿಪಿ ಮೂಲಕ ಪಡಿತರ ಪಡೆಯುತ್ತಿದ್ದ ಈಗ ಚೀಟಿದಾರ ಕುಟುಂಬ ಒಬ್ಬ ಸದಸ್ಯ ಬೆರಳಚ್ಚು ನೀಡುವುದು ಕಡ್ಡಾಯ. ಆದರೆ ವಯಸ್ಸಾದ ಕಾರಣ ಕೆಲವರಲ್ಲಿ ಬೆರಳಚ್ಚು ಸವೆದಿದ್ದರಿಂದ, ಕೈಗಳು ನಡುಗುವುದರಿಂದ ಬೆರಳಚ್ಚು ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಅನೇಕ ಜನ ಪಡಿತರದಿಂದ ವಂಚಿತರಾಗುತ್ತಿದ್ದಾರೆ.
ಹಟ್ಟಿ, ಗುರುಗುಂಟಾ, ಕೋಠಾ, ಆನ್ವರಿ, ನಿಲೋಗಲ್, ಯಲಗಟ್ಟಾ, ಪೈದೊಡ್ಡಿ, ಯರಜಂತಿ, ಬಂಢೆಭಾವಿ, ಮಾಚನೂರು, ನಿಲೋಗಲ್, ವೀರಾಪೂರ, ಗೆಜ್ಜಲಗಟ್ಟಾ, ಚಿಕ್ಕಹೆಸರೂರು, ಹೀರೆ ಹೆಸರೂರು, ಚುಕನಟ್ಟಿ, ನಗನೂರು ಗ್ರಾಮದಲ್ಲಿ ವಯಸ್ಸಾದವರು, ಅನಾರೋಗ್ಯಕ್ಕೆ ಒಳಗಾದವರೇ ಪಡಿತರದಿಂದ ವಂಚಿತರಾಗುತ್ತಿದ್ದಾರೆ.
‘ಕುಟುಂಬದಲ್ಲಿ ಬೆರಳಚ್ಚು ನೀಡುವಷ್ಟು ಆರೋಗ್ಯವಂತರು ಇದ್ದರೆ ಪಡಿತರ ಸಿಗುತ್ತದೆ. ಉಳಿದ ಜನರ ಸಮಸ್ಯೆ ಬಗೆಹರಿಸುವವರು ಇಲ್ಲದಂತಾಗಿದೆ’ ಎನ್ನುವುದು ನೊಂದವರ ಅಳಲು.
ತೀರಾ ವಯಸ್ಸಾದವರು ಮತ್ತು ಪಡಿತರ ಕೇಂದ್ರಗಳಿಗೆ ತೆರಳಿ ಪಡಿತರ ಪಡೆಯಲು ಸಾಧ್ಯವಿಲ್ಲ ಎನ್ನುವ ಸ್ಥಿತಿಯಲ್ಲಿ ಇರುವವರಿಗೆ ಬೆರಳಚ್ಚು ನೀಡುವ ನಿಯಮದಿಂದ ತೀವ್ರ ಸಮಸ್ಯೆಯಾಗಿದೆ. ಅಧಿಕಾರಿಗಳು ನೆರವಿಗೆ ಬರಬೇಕು ಎನ್ನುತ್ತಾರೆ ಸಾರ್ವಜನಿಕರು.
‘ಬೆರಳಚ್ಚು ಬಾರದ ಕಾರಣ ಪಡಿತರ ಸಿಗುತ್ತಿಲ್ಲ. ಸಮಸ್ಯೆ ಬಗೆಹರಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಲಿ’ ಎಂದು ತಾ.ಪಂ ಮಾಜಿ ಸದಸ್ಯ ರಾಜ ಸೇತುರಾಮ ನಾಯಕ ಆಗ್ರಹಿಸಿದ್ದಾರೆ.
‘ಪಡಿತರ ಸೌಲಭ್ಯದಿಂದ ವಂಚಿತರಾಗದ ರೀತಿಯಲ್ಲಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗುವುದು’ ಎಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಪ್ರಜಾವಾಣಿಗೆ ತಿಳಿಸಿದರು.
‘ಬೆರಳಚ್ಚು ನೀಡುವಾಗ ಆಗುವ ಸಮಸ್ಯೆಗಳ ಬಗ್ಗೆ ದೂರುಗಳು ಬಂದಿವೆ. ಸಂಬಂಧಪಟ್ಟ ಮೇಲಧಿಕರಿಗಳ ಗಮನಕ್ಕೆ ತರಲಾಗುವುವುದು’ ಆಹಾರ ಸರಬರಾಜು ಇಲಾಖೆಯ ಅಧಿಕಾರಿ ಅಬ್ದುಲ್ ರೋಪ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.