ADVERTISEMENT

ರಾಯಚೂರು: ಐಡಿಬಿಐ ಬ್ಯಾಂಕಿಗೆ ₹ 10 ಸಾವಿರ ದಂಡ

ವಿಮಾ ಹಣ ಪಾವತಿಸಲು ನಿರಾಕರಿಸಿದ್ದ ಬ್ಯಾಂಕ್‌

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2025, 16:06 IST
Last Updated 12 ಮಾರ್ಚ್ 2025, 16:06 IST
ಐಡಿಬಿಐ ಬ್ಯಾಂಕ್ ಪ್ರಾತಿನಿಧಿಕ ಚಿತ್ರ
ಐಡಿಬಿಐ ಬ್ಯಾಂಕ್ ಪ್ರಾತಿನಿಧಿಕ ಚಿತ್ರ   

ರಾಯಚೂರು:  ವಿಮಾ ಕಂತು ಸ್ವಯಂ ನವೀಕರಣದಿಂದ ಪಾವತಿಯಾಗಿದ್ದರೂ ಮೃತ ಮಹಿಳೆಯ ಪತಿಗೆ ವಿಮಾ ಹಣ ₹ 2 ಲಕ್ಷ ಪಾವತಿಸದ ಇಲ್ಲಿಯ ಐಡಿಬಿಐ ಬ್ಯಾಂಕಿಗೆ ರಾಯಚೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ₹ 10,000 ದಂಡ ವಿಧಿಸಿದೆ.

ನಗರದ ವಿಜಯ ಆನಂದಪ್ಪ ಅವರ ಪತ್ನಿ ವಸಂತಕುಮಾರಿ ಐಡಿಬಿಐ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಪ್ರಧಾನಮಂತ್ರಿ ಜೀವನ ಬಿಮಾ ಯೋಜನೆಯಲ್ಲಿ (ಪಿ.ಎಂ.ಜೆ.ಬಿ.ವೈ) ₹ 2 ಲಕ್ಷ ವಿಮೆಯ ಪಾಲಿಸಿಯನ್ನು ಬ್ಯಾಂಕ್ ಮೂಲಕ ಪಡೆದಿದ್ದರು. ಅದಕ್ಕಾಗಿ ಪ್ರತಿ ವರ್ಷ ಬ್ಯಾಂಕ್ ಖಾತೆ ಮೂಲಕ ₹330 ವಿಮಾ ಕಂತು ಸ್ವಯಂ  ಕಡಿತಗೊಳ್ಳುವಂತೆ ಮಾಡಿದರು.

ವಸಂತಕುಮಾರಿ 2020ರ ಮೇ 11ರಂದು ಮೃತಪಟ್ಟಿದ್ದರು. ಪತಿ ವಿಜಯ ಅವರು ₹ 2 ಲಕ್ಷ ವಿಮಾ ಮೊತ್ತ ಪಾವತಿಸುವಂತೆ ಐಡಿಬಿಐ ಬ್ಯಾಂಕ್‌ಗೆ ಮನವಿ ಮಾಡಿದ್ದರು. ಖಾತೆ ಚಾಲ್ತಿಯಲ್ಲಿರದ ಕಾರಣ ಪಾಲಿಸಿ ರದ್ದಾಗಿದೆ. ವಿಮಾ ಮೊತ್ತ ಪಾವತಿಸಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದರು.

ADVERTISEMENT

ನಂತರ ವಿಜಯ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಆಯೋಗದ ಅಧ್ಯಕ್ಷ ಕೆ.ವಿ.ಸುರೇಂದ್ರಕುಮಾರ ಹಾಗೂ ಸದಸ್ಯ ಪ್ರಭುದೇವ ಪಾಟೀಲ ಅವರು, ನಿಷ್ಕ್ರಿಯ ಖಾತೆ ಎಂದು ಪರಿಗಣಿಸಿ ವಿಮಾ ಮೊತ್ತ ಕೊಡಲು ನಿರಾಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಮಾ ಮೊತ್ತವನ್ನು ಬಡ್ಡಿ ಸಮೇತ ಪಾವತಿಸಬೇಕು ಎಂದು ಆದೇಶಿಸಿದ್ದಾರೆ.

ದೂರುದಾರಿಗೆ ₹ 2 ಲಕ್ಷ ವಿಮಾ ಮೊತ್ತವನ್ನು ಬಡ್ಡಿ ಸಹಿತ ಪಾವತಿಸಬೇಕು. ಮಾನಸಿಕ ಹಿಂಸೆ ನೀಡಿರುವುದಕ್ಕೆ ₹ 10 ಸಾವಿರ ಮತ್ತು ದೂರಿನ ವೆಚ್ಚವಾಗಿ ₹ 5 ಸಾವಿರ ಪಾವತಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಜಿಲ್ಲಾ ಆಯೋಗದ ಪ್ರಭಾರ ಸಹಾಯಕ ರಿಜಿಸ್ಟ್ರಾರ್ ಅಣ್ಣಾರಾವ್ ಹಾಬಾಳಕರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.