ಶಕ್ತಿನಗರ: ಡಿ.ಯದ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಜಳ್ಳಿ ಗ್ರಾಮದ ರೈತ ಮಾರ್ತೇಂಡಪ್ಪ ಅವರು, ಕೃಷಿ ಜತೆಗೆ ಮೀನುಗಾರಿಕೆ ಮಾಡುವ ಮೂಲಕ ಸಮಗ್ರ ಕೃಷಿ ಮಾಡುತ್ತಾ ಇತರ ರೈತರಿಗೆ ಮಾದರಿಯಾಗಿದ್ದಾರೆ.
ಅವರಿಗೆ ಒಟ್ಟು 33 ಎಕರೆ ಜಮೀನಿದ್ದು, ಅದರಲ್ಲಿ 5 ಎಕರೆಯಲ್ಲಿ ಹತ್ತಿ, 15 ಎಕರೆಯಲ್ಲಿ ಭತ್ತ, 6 ಎಕರೆಯಲ್ಲಿ ಮೋಸಂಬಿ, 2 ಎಕರೆಯಲ್ಲಿ ತೊಗರಿ, 1 ಎಕರೆಯಲ್ಲಿ ಮೆಣಸಿನಕಾಯಿ, 3 ಎಕರೆಯಲ್ಲಿ ಮಾವು ಬೆಳೆಯಲಾಗಿದೆ.
ಅವರು ಬೆಳೆಗಳಿಗೆ ನೀರುಣಿಸಲು ತೋಟಗಾರಿಕೆ ಇಲಾಖೆಯಿಂದ 150 ಮತ್ತು 200 ಫೀಟ್ ತೆಗೆಸಿದ್ದ 1 ಎಕರೆಯ ಬೃಹತ್ ಕೃಷಿ ಹೊಂಡದಲ್ಲೇ ಉಪ ಕಸುಬಾಗಿ ಮೀನಿನ ಕೃಷಿ ಮಾಡುತ್ತಿದ್ದಾರೆ.
₹ 1 ಲಕ್ಷ ವೆಚ್ಚದಲ್ಲಿ ಎರಡು ಬೋರವೆಲ್ ಹಾಕಿಸಿಕೊಂಡಿದ್ದಾರೆ. ಆ ಬೋರವೆಲ್ಗಳ ನೀರನ್ನು ಕೃಷಿ ಹೊಂಡಕ್ಕೆ ತುಂಬಿಸಿಕೊಳ್ಳುತ್ತಿದ್ದರು. ಇದೇ ಹೊಂಡದ ನೀರನ್ನು ಎಲ್ಲಾ ಬೆಳೆಗಳಿಗೂ ಪೂರೈಸುತ್ತಿದ್ದಾರೆ. ₹ 8 ಲಕ್ಷ ಖರ್ಚು ಆಗುತ್ತಿದ್ದು ಅದರಲ್ಲಿ ₹ 5 ಲಕ್ಷಕ್ಕೂ ಅಧಿಕ ಆದಾಯ ಸಿಗುತ್ತದೆ ಎನ್ನುತ್ತಾರೆ ರೈತ ಮಾರ್ತೇಂಡಪ್ಪ.
ಕೃಷಿ ಇಲಾಖೆಯಿಂದ ಕೊಯ್ಲು ಕಟಾವು ಮಾಡುವ ಯಂತ್ರ , ಸಿಂಪಿಕಲರ್, ತಡಪಾಲ್ಗಳನ್ನು ಪಡೆದುಕೊಂಡಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಕೂಲಿಕಾರರು ಸಿಗದೆ ಪರಿಣಾಮ, ಸಂಕಷ್ಟಕ್ಕೀಡಾಗಿತ್ತು. ಮನೆಯಲ್ಲಿ 25 ಜನ ಜೀವನ ನಡೆಸುವುದು ಕಷ್ಟಕರವಾಗಿತ್ತು. ಬದುಕಿಗೆ ಕೈ ಹಿಡಿದಿದ್ದು ಸಮಗ್ರ ಕೃಷಿ. ಇದರಲ್ಲಿ ಎಲ್ಲರ ಜೀವನ ನಡೆಯುತ್ತಿದೆ ಎಂದು ಹೇಳಿದರು.
ಸಿಂಡಿಕೇಟ್ ಬ್ಯಾಂಕ್ನಲ್ಲಿ ₹ 27 ಲಕ್ಷ ಸಾಲ ಮಾಡಿ ಸಮಗ್ರ ಕೃಷಿ ಮಾಡಲಾಗಿದೆ. ಕೃಷಿ ಜತೆಗೆ ಮೀನು ಸಾಕಣಿಕೆ ಮಾಡುತ್ತಿರುವ ರೈತರಿಗೆ
ಅಗತ್ಯ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಲು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ ಎಂದು ಗಂಜಳ್ಳಿ ರೈತ ಸುರೇಶ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.