ರಾಯಚೂರು: ಗುರ್ಜಾಪುರ ಬ್ರಿಜ್ ಕಂ ಬ್ಯಾರೇಜ್ ಮುಳುಗಡೆ
ರಾಯಚೂರು: ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೂ ಮೋಡ ಕವಿದ ವಾತಾವರಣವಿದ್ದರೂ ಭಾನುವಾರ ಮಳೆ ಸ್ವಲ್ಪ ಬಿಡುವು ನೀಡಿತ್ತು. ಹಟ್ಟಿ ಚಿನ್ನದಗಣಿ ಪ್ರದೇಶ ಹಾಗೂ ಕವಿತಾಳದಲ್ಲಿ ಸಂಜೆ ತುಂತುರ ಮಳೆ ಸುರಿದಿದೆ.
ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಾರಾಯಣಪುರದ ಬಸವಸಾಗರ ಜಲಾಶಯದಿಂದ 1.22 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಸಲಾಗಿದೆ. ಭೀಮಾ ನದಿಗೆ ಪ್ರವಾಹ ಬಂದಿದೆ. ಭೀಮಾ ನದಿ ಕೃಷ್ಣೆಗೆ ಸೇರಿದ ನಂತರ ಕೃಷ್ಣಾ ನದಿ ಅಪಾಯಪಟ್ಟ ಮೀರಿ ಹರಿಯುತ್ತಿದೆ. ಗುರ್ಜಾಪುರ ಬ್ರಿಜ್ ಕಂ ಬ್ಯಾರೇಜ್ ಮುಳುಗಡೆಯಾಗಿದೆ. ರಾಯಚೂರಿನಿಂದ ಯಾದಗಿರಿ ನಡುವಿನ ಸಂಪರ್ಕ ಬಂದ್ ಆಗಿದೆ.
ರಾಯಚೂರು ತಾಲ್ಲೂಕಿನ ಕೊರವಿಹಳ್ಳ ಹಾಗೂ ಡಿ.ರಾಂಪುರ ಸಮೀಪ ನೂರಾರು ಎಕರೆ ಹೊಲಗಳು ನೀರಿನಲ್ಲಿ ಮುಳುಗಡೆಯಾಗಿವೆ. ಭತ್ತದ ಬೆಳೆಗಳು ನೀರಿನಲ್ಲಿ ಮುಳುಗಿದ್ದು, ರೈತರು ಆತಂಕದಲ್ಲಿ ಇದ್ದಾರೆ.
‘ಆಂಧ್ರಪ್ರದೇಶದ ಜುರಾಲಾ ಜಲಾಶಯದ ಎಲ್ಲ ಕ್ರಸ್ಟ್ಗೇಟ್ಗಳನ್ನು ತೆರೆಯಲಾಗಿದೆ. ಆಂಧ್ರಪ್ರದೇಶದ ಅಧಿಕಾರಿಗಳು ಹಾಗೂ ನೆರೆಯ ಯಾದಗಿರಿ ಜಿಲ್ಲೆಯ ಅಧಿಕಾರಿಗಳು ಸಂಪರ್ಕದಲ್ಲಿ ಇದ್ದಾರೆ. ಸಕಾಲದಲ್ಲಿ ಮಾಹಿತಿ ಕೊಡುತ್ತಿದ್ದಾರೆ‘ ಎಂದು ರಾಯಚೂರು ತಹಶೀಲ್ದಾರ್ ಸುರೇಶ ಶರ್ಮಾ ತಿಳಿಸಿದ್ದಾರೆ.
ಗೋಡೆ ಕುಸಿದು ವೃದ್ಧೆ ಸಾವು: ಜಿಟಿಜಿಟಿ ಮಳೆಯಿಂದಾಗಿ ಶನಿವಾರ ರಾಯಚೂರು ನಗರದ ಗಂಜ್ ವೃತ್ತದ ಬಳಿಯ ಹಳೆ ಮನೆಯ ಮೇಲ್ಚಾವಣಿ ಕುಸಿದು ಈಶಮ್ಮ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರ ರಕ್ಷಣೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.