ಲಿಂಗಸುಗೂರು: ತಾಲ್ಲೂಕಿನ ಕಸಬಾಲಿಂಗಸುಗೂರು ಗ್ರಾಮದ ಆರಾಧ್ಯ ದೈವ ಕುಪ್ಪಿಭೀಮದೇವರ ಜಾತ್ರಾಮಹೋತ್ಸವ ನಿಮಿತ್ತ ಗುರುವಾರ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ಒಂದು ವಾರದಿಂದ ಹೋಮ, ಹವನ ಸೇರಿ ವಿವಿಧ ಪೂಜಾ ಕೈಂಕರ್ಯ, ಸಾಂಪ್ರದಾಯಿಕ ಆಚರಣೆಗಳು ಸಾಂಗವಾಗಿ ನಡೆದವು. ಗುರುವಾರ ಬೆಳಗಿನ ಜಾವ ಕುಪ್ಪಿಭೀಮ ದೇವರ ಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆ, ಬೆಳ್ಳಿ–ಬಂಗಾರದ ಒಡವೆಗಳು, ಎಲೆಚೆಟ್ಟು, ಹೂಗಳಿಂದ ಅಲಂಕಾರ ಮಾಡಲಾಯಿತು.
ರಥಾಂಗ ಹೋಮ, ತೇರಿಗೆ ಪೂಜೆ ನೆರವೇರಿಸಿದ ವಿಪ್ರ ಸಮಾಜದ ಮುಖಂಡರು ರಥೋತ್ಸವ ಸಿದ್ಧತೆಗೆ ನಾಂದಿ ಹಾಡಿದರು. ದೇವಸ್ಥಾನ ಸಮಿತಿ, ಸಂಘ ಸಂಸ್ಥೆಗಳು, ವಾಹನ ನಿರ್ವಾಹಕರು, ಚಾಲಕರು ವೈವಿಧ್ಯಮಯ ಹೂಗಳು ಹಾಗೂ ತಳಿರು ತೋರಣಗಳಿಂದ ರಥಕ್ಕೆ ಅಲಂಕಾರ ಮಾಡಿದರು. ಉತ್ಸವ ಮೂರ್ತಿಯನ್ನು ಭಾಜಾ ಭಜಂತ್ರಿ, ಮೆರವಣಿಗೆ ಸಮೇತ ಕರೆತಂದು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಭಕ್ತರು ಜಯಘೋಷ ಹಾಕುತ್ತ ರಥವನ್ನು ಎಳೆದರು. ಭಕ್ತರು ಮಂಡಕ್ಕಿ, ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.