ADVERTISEMENT

ಪ್ರತಿಯೊಬ್ಬರೂ ಕುರುಬರ ಇತಿಹಾಸ ತಿಳಿದುಕೊಳ್ಳಿ

13 ಗ್ರಂಥಗಳನ್ನು ಲೋಕಾರ್ಪಣೆ: ಕಾಂಗ್ರೆಸ್‌ ಮುಖಂಡ ಎಚ್‌.ಎಂ.ರೇವಣ್ಣ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 15:24 IST
Last Updated 9 ಅಕ್ಟೋಬರ್ 2021, 15:24 IST
ರಾಯಚೂರಿನ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕುರುಬರ ಸಾಂಸ್ಕೃತಿಕ ಪರಿಷತ್ ಅಭಿಮಾನಿಗಳ ವತಿಯಿಂದ ಶನಿವಾರ ಆಯೋಜಿಸಿದ್ದ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆಯ 13 ಗ್ರಂಥಗಳನ್ನು ಲೋಕಾರ್ಪಣೆ ಸಮಾರಂಭದಲ್ಲಿ ಸಮಾಜದ ಮುಖಂಡ ಬಿ.ಕೆ.ರವಿ ಮಾತನಾಡಿದರು
ರಾಯಚೂರಿನ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕುರುಬರ ಸಾಂಸ್ಕೃತಿಕ ಪರಿಷತ್ ಅಭಿಮಾನಿಗಳ ವತಿಯಿಂದ ಶನಿವಾರ ಆಯೋಜಿಸಿದ್ದ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆಯ 13 ಗ್ರಂಥಗಳನ್ನು ಲೋಕಾರ್ಪಣೆ ಸಮಾರಂಭದಲ್ಲಿ ಸಮಾಜದ ಮುಖಂಡ ಬಿ.ಕೆ.ರವಿ ಮಾತನಾಡಿದರು   

ರಾಯಚೂರು: ಕುರುಬ ಸಮಾಜ ವಿಶಿಷ್ಟ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಸಮಾಜದ ಇತಿಹಾಸ, ಸಂಸ್ಕೃತಿಯನ್ನು ಪ್ರತಿಯೊಬ್ಬರಿಗೂ ತಿಳಿಸುವ ಉದ್ದೇಶ ಹೊಂದಿದೆ. ಸಮಾಜದ ಪ್ರತಿಯೊಬ್ಬರೂ ಕುರುಬರ ಇತಿಹಾಸ ತಿಳಿದುಕೊಳ್ಳಬೇಕು ಎಂದು ಕುರುಬರ ಸಾಂಸ್ಕೃತಿಕ ಪರಿಷತ್ತಿನ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಸಲಹೆ ನೀಡಿದರು.

ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕುರುಬರ ಸಾಂಸ್ಕೃತಿಕ ಪರಿಷತ್ ಅಭಿಮಾನಿಗಳ ವತಿಯಿಂದ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆಯ 13 ಗ್ರಂಥಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಮಾಜದ ಮುಖಂಡರು ಮುಂದಿನ ಪೀಳಿಗೆಗೆ ಸಂಸ್ಕೃತಿ ರವಾನಿಸಲು ಜಾಗೃತಿ ಮೂಡಿಸಬೇಕು. ಅನೇಕರಿಗೆ ಕುರುಬ ಸಮಾಜದ ಇತಿಹಾಸ ತಿಳಿದಿಲ್ಲ. ಇತಿಹಾಸ ಹಾಗೂ ಬೆಳೆದುಬಂದ ದಾರಿ ಸಮಾಜದ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಈ ಹಿಂದೆ ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಚುನಾಯಿತರಿಂದ ಕಮ್ಮಟ ಕಾರ್ಯಕ್ರಮ ನಡೆಸಲಾಗಿತ್ತು. ಸಮಾಜದ ಎಲ್ಲಾ ಜನರು 13 ಮಾಲಿಕೆ ಹೊರತರಲು ಸಹಕಾರ ನೀಡಿದ್ದಾರೆ. ಸಮಾಜ ಅಭಿವೃದ್ಧಿಯಾಗಬೇಕದಾರೆ ರಾಜಕೀಯ ಅಧಿಕಾರ ಮುಖ್ಯ. ಕೇವಲ ರಾಜಕೀಯ ಚಿಂತನೆಗಳಿಂದ ಅಸಾಧ್ಯ. ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬಂದಾಗ ಬಹುರೂಪಿ ಸಮಾಜ ನಿರ್ಮಾಣ ಸಾಧ್ಯ ಎಂದರು.

ADVERTISEMENT

ಈ ಗ್ರಂಥಗಳು ಕಟ್ಟಕಡೆಯ ವ್ಯಕ್ತಿಗೆ ತಲುಪುವ ಮೂಲಕ ಸಮಾಜದ ಬಗ್ಗೆ ಅರಿವು ಮೂಡಿಸುವ ಜನತೆಗೆ ಕುರುಬರ ಸಂಸ್ಕ್ರತಿ ದರ್ಶನ ಮಾಲಿಕೆಯ 13 ಗ್ರಂಥಗಳು ಮಾರ್ಗದರ್ಶನವಾಗಲಿ. ಸಮಾಜದ ಕಾರ್ಯ ಚಟುವಟಿಕೆಗಳಲ್ಲಿ ನಾವು ರಾಜಕೀಯ ಬೆರೆಸುವುದಿಲ್ಲ. ಇನ್ನೂ ಸಾಧಿಸುವುದು ಬೇಕಾದಷ್ಟಿದೆ. ಸಮಾಜದ ಸಂಸ್ಕ್ರತಿ ಮನೆ ಮನೆಗೆ ತಲುಪಿಸುವ ಚಿಂತನೆ ನಡೆದಿದೆ ಎಂದರು.

ಪ್ರಾಸ್ತಾವಿಕವಾಗಿ ಕುರುಬ ಸಮಾಜದ ಮುಖಂಡ ಬಿ.ಕೆ. ರವಿ ಮಾತನಾಡಿ, ಕುರುಬ ಸಮಾಜದ ಕೊಡುಗೆ ರಾಷ್ಟಕ್ಕೆ ಅಪಾರ. ಸಮಾಜಕ್ಕೆ ತನ್ನದೇ ಆದ ಚಾರಿತ್ರಿಕ ಹಿನ್ನೆಲೆ ಇದೆ. ಸಾಂಸ್ಕ್ರತಿಕ ಇತಿಹಾಸ ಇರುವ ಸಮಾಜ. ರಾಜ್ಯದಲ್ಲಿ ಮೂರನೇ ದೊಡ್ಡ ಜನಸಂಖ್ಯೆ ಇದೆ. ಕಾರ್ಗಿಲ್‌ ಯುದ್ಧದಲ್ಲಿ ಕಂಬಳಿ ನೇಯ್ದು, ಕುರಿ ಕಾದು ಬದುಕು ಸಾಗಿಸುತ್ತಿರುವ ಕುರುಬ ಸಮಾಜ ಭವ್ಯ ಪರಂಪರೆಯನ್ನು ಹೊಂದಿದೆ ಎಂದರು.

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಸಮಾಜದ ಸಂಗೋಳ್ಳಿ ರಾಯಣ್ಣ. ಉತ್ತರ ಭಾರತದಲ್ಲಿ ಹುಟ್ಟಿದ್ದರೆ ಅಂತರರಾಷ್ಟ್ರೀಯ ನಾಯಕನಾಗುತ್ತಿದ್ದ. ರಾಯಣ್ಣನ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ನಂದಗಡವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕು. ಸಮಾಜದ ಇತಿಹಾಸವನ್ನು ವೈಜ್ಞಾನಿಕವಾಗಿ ದಾಖಲು ಮಾಡಿಟ್ಟ ಪ್ರಥಮ ಸಮಾಜ. ಅಪಾರ ಶ್ರಮವಹಿಸಿ ಕುರುಬ ಸಮುದಾಯದ ಸಾಂಸ್ಕ್ರತಿಕ ಹಿನ್ನೆಲೆ ದಾಖಲೀಕರಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರದೇಶ ಕುರುಬರ ಸಂಘದ ನಿರ್ದೇಶಕ ಎಂ.ಈರಣ್ಣ, ಕೆ.ಪಂಪಾಪತಿ, ಕರಿಯಪ್ಪ, ಬಿ.ಜಿ.ಹುಲಿ, ಮಹಿಳಾ ಸಾಂಸ್ಕೃತಿಕ ಅಧ್ಯಕ್ಷೆ ಆರ್. ಕೆ. ವಚನಾ, ಅಹಲ್ಯಾಬಾಯಿ, ನಾಗವೇಣಿ ಎಸ್. ಪಾಟೀಲ, ವೇಣುಗೋಪಾಲ, ಲಕ್ಷ್ಮೀ ದೇವಿ, ಕೆ.ಬಸವಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.