
ರಾಯಚೂರು: ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧದ ನಡುವೆ ಕೇಂದ್ರ ಸರ್ಕಾರ ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳನ್ನು ನವೆಂಬರ್ 21ರಿಂದ ಜಾರಿ ಮಾಡಿದೆ. ಈ ಕರಾಳ ಕಾರ್ಮಿಕ ಸಂಹಿತೆಗಳನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
‘ನಾಲ್ಕು ಕಾರ್ಮಿಕ ಸಂಹಿತೆಗಳ ಈ ನಿರಂಕುಶ ಮತ್ತು ಅಪ್ರಜಾಸತ್ತಾತ್ಮಕ ಅಧಿಸೂಚನೆಯು ಎಲ್ಲ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಧಿಕ್ಕರಿಸುತ್ತದೆ. ಭಾರತದ ಕಲ್ಯಾಣ ರಾಜ್ಯದ ಸ್ವರೂಪವನ್ನು ಧ್ವಂಸಗೊಳಿಸಿದೆ. ಅಸ್ತಿತ್ವದಲ್ಲಿದ್ದ 29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿದೆ’ ಎಂದರು.
ಕಾರ್ಮಿಕ ಸಂಘಟನೆಗಳು ಅನೇಕ ಬಾರಿ ಪ್ರತಿಭಟನೆ ನಡೆಸಿವೆ. ಸಭೆಗಳನ್ನು ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕಿದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ತನ್ನ ಮೊಂಡುತನ ಪ್ರದರ್ಶಿಸುತ್ತಿದೆ ಎಂದು ಹೇಳಿದರು.
ಕಾರ್ಮಿಕರ ಹಕ್ಕುಗಳು ಮತ್ತು ಅರ್ಹತೆಗಳನ್ನು ಕಸಿದುಕೊಂಡು ಗುಲಾಮಗಿರಿಯನ್ನು ಹೇರಲು ಪ್ರಯತ್ನಿಸುವ ಈ ಸಂಹಿತೆಗಳು ಕಾರ್ಮಿಕರ ಜೀವನ ಮತ್ತು ಜೀವನೋಪಾಯದ ಮೇಲೆ ಮಾರಣಾಂತಿಕ ದಾಳಿ ಮಾಡಿವೆ ಎಂದು ಟೀಕಿಸಿದರು.
ಪ್ರತಿಭಟನಕಾರರು ಟಿಪ್ಪು ಸುಲ್ತಾನ್ ಉದ್ಯಾನದಿಂದ ಅಂಬೇಡ್ಕರ್ ವೃತ್ತದ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಅಂಬೇಡ್ಕರ್ ವೃತ್ತದಲ್ಲಿ ಕಾರ್ಮಿಕ ಸಂಹಿತೆಗಳ ಅಧಿಸೂಚನೆಯ ಪ್ರತಿಗಳನ್ನು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವನ್ನು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಎಚ್.ಪದ್ಮಾ.ಪ್ರಧಾನ ಕಾಯ೯ದಶಿ೯, ಡಿ.ಎಸ್.ಶರಣಬಸವ, ಪದಾಧಿಕಾರಿಗಳಾದ ರುದ್ರಪ್ಪನಾಯಕ, ಯೂಸುಫ್ ಸಾಬ, ಶರ್ಫುದ್ದೀನ್, ಚನ್ನಾರೆಡ್ಡಿ, ಈರಣ್ಣಸ್ವಾಮಿ, ಮರಿಯಮ್ಮ ಕೆ.ಜಿ. ವೀರೇಶ, ರೇಣುಕಮ್ಮ ಕರಿಯಪ್ಪ ಅಚ್ಚೊಳ್ಳಿ, ಜಿಲಾನಿ ಪಾಷಾ, ಗೋಕುರಮ್ಮ, ಕಲ್ಯಾಣಮ್ಮ, ವಿಶ್ವನಾಥಸ್ವಾಮಿ, ಅಕ್ಕಮಹಾದೇವಿ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.