
ರಾಯಚೂರು: ಜಿಲ್ಲೆಯಲ್ಲಿ ಬರದಿಂದಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದರೆ, ನದಿ, ಕೆರೆಗಳು ಬತ್ತಿ ಜಲಚರಗಳು ಸಾವಿಗೀಡಾಗುತ್ತಿವೆ.
ರಾಯಚೂರು ತಾಲ್ಲೂಕಿನ ಮನ್ಸಲಾಪೂರು ಗ್ರಾಮ ಪಂಚಾಯಿತಿಯ ಮರ್ಚೆಡ್ ಕೆರೆ ಬತ್ತಿ ಹೋಗಿದ್ದು ಕೆರೆಯಲ್ಲಿನ ಸಾವಿರಾರು ಮೀನುಗಳು ಮೃತಪಟ್ಟಿವೆ.
ಮರ್ಚೆಡ್ ಕೆರೆ ಸುಮಾರು 400 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿದೆ. ರಣ ಬಿಸಿಲಿಗೆ ಕೆರೆಯ ನೀರು ಒಣಗಿ ಹೋಗಿದೆ. ಮನ್ಸಲಾಪೂರ ಮತ್ತು ಮರ್ಚೆಡ್ ಗ್ರಾಮದ ಮೀನುಗಾರರು ಮೀನು ಸಾಕಾಣಿಕೆ ಮಾಡಿ ಜೀವನ ಸಾಗುತ್ತಿದ್ದಾರೆ. ಕೆರೆಯು ಸಂಪೂರ್ಣ ಒಣಗಿದ್ದರಿಂದ ಸಾಕಾಣಿಕೆ ಮಾಡಿದ ಮೀನುಗಳು ಸಾವನಪ್ಪಿವೆ, ಇದರಿಂದಾಗಿ ಮೀನುಗಾರರ ಬದುಕು ಮೂರಾಬಟ್ಟೆಯಾಗಿದೆ.
ತಾಲ್ಲೂಕಿನಲ್ಲಿಯೇ ಅತ್ಯಂತ ಬೃಹತ್ ಗಾತ್ರದ ಕೆರೆಯಾಗಿದೆ. ಹಿಂದೆ ಸುತ್ತಮುತ್ತಲಿನ ಗ್ರಾಮದ ನಿವಾಸಿಗಳಿಗೆ ಕುಡಿಯುವ ನೀರಿನ ಜಲ ಮೂಲವಾಗಿತ್ತು. ಮೀನು ಸಾಕಾಣಿಕೆ ಹಾಗೂ ಗೃಹ ಬಳಕೆಗೆ ಕೆರೆಯ ನೀರು ಬಳಸಲಾಗುತ್ತಿತ್ತು.
‘ಕೆರೆಯಲ್ಲಿ ನೀರಿದ್ದ ಸಂದರ್ಭದಲ್ಲಿ ಸುಮಾರು ₹ 15 ಲಕ್ಷ ವೆಚ್ಚದಲ್ಲಿ ಲಕ್ಷಾಂತರ ಮೀನು ಮರಿಗಳನ್ನು ತಂದು ಕೆರೆಗೆ ಬಿಡಲಾಗಿತ್ತು. ಮೀನುಗಳ ಸಾಕಿ, ಮಾರಾಟ ಮಾಡಬೇಕಾದ ಸಂದರ್ಭದಲ್ಲಿ ಕೆರೆ ಬತ್ತಿದೆ. ಸರ್ಕಾರ ಮೀನುಗಾರರಿಗೆ ಪರಿಹಾರ ಕೊಡಬೇಕು’ ಎಂದು ರೈತ ಮಲ್ಲಪ್ಪ ನಾಯಕ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.