ಲಿಂಗಸುಗೂರು: ‘ಬೆಂಗಳೂರು ಸ್ವಾಮಿ ವಿವೇಕಾನಂದ ಸೇವಾಶ್ರಮ ಮತ್ತು ಯುಎಸ್ಎದ ಸೇವಾ ಇಂಟರ್ ನ್ಯಾಷನಲ್ ಸಹಭಾಗಿತ್ವದಲ್ಲಿ ಸ್ಥಳೀಯ ಈಶ್ವರ ದೇವಸ್ಥಾನದ ಆವರಣದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಗುರುವಾರ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ಸ್ವಾಮಿ ವಿವೇಕಾನಂದ ಸೇವಾಶ್ರಮದ ಸ್ವಯಂ ಸೇವಕ ವ್ಯವಸ್ಥಾಪಕ ಡಾ.ಗುರುರಾಜ ದೇಶಪಾಂಡೆ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೇವಾ ಇಂಟರ್ ನ್ಯಾಷನಲ್ ಯುಎಸ್ಎ ಸಂಸ್ಥೆ ಕೋವಿಡ್ ನಿಯಂತ್ರಣ ಸಂಬಂಧಿಸಿದಂತೆ 9 ಕಾನ್ಸನ್ಟ್ರೇಟರ್ ಪೂರೈಕೆ ಮಾಡಲಾಗಿತ್ತು. ನೂರು ಜಂಬೋ ಸಿಲೆಂಡರ್ ಆಕ್ಸಿಜನ್ ಘಟಕ ಸ್ಥಾಪಿಸಲು ಸಂಸ್ಥೆಯ ಉಪಾಧ್ಯಕ್ಷ ಅನೀಲ ದೇಶಪಾಂಡೆ ಅವರು, ₹ 1.90 ಕೋಟಿ ದೇಣಿಗೆ ಕೊಡಿಸಿದ್ದಾರೆ’ ಎಂದು ಹೇಳಿದರು.
‘ದಿವ್ಯದೃಷ್ಠಿ ಫೌಂಡೇಶನ್ ಮುದಗಲ್, ಈಶ್ವರ ದೇವಸ್ಥಾನ ಸಮಿತಿ ಸ್ಥಳೀಯ ಸಹಕಾರದಿಂದ ಆಕ್ಸಿಜನ್ ಉತ್ಪಾದನ ಘಟಕಕ್ಕೆ ಶಂಕುಸ್ಥಾಪನೆ ನಡೆಯಲಿದೆ. ಸ್ಥಳೀಯವಾಗಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಜನ ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿಯೆ ಆಕ್ಸಿಜನ್ ಪೂರೈಕೆ ಮಾಡಲಾಗುವುದು. ಎರಡು ತಿಂಗಳಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ’ ಎಂದು ವಿವರಿಸಿದರು.
ಈಶ್ವರ ದೇವಸ್ಥಾನ ಸಮಿತಿ ಹಿರಿಯ ಮುಖಂಡ ಮಲ್ಲಣ್ಣ ವಾರದ, ಸ್ವಾಮಿ ವಿವೇಕಾನಂದ ಸೇವಾಶ್ರಮದ ಸ್ವಯಂ ಸೇವಕ ವ್ಯವಸ್ಥಾಪಕ ಡಾ. ಶರಣಗೌಡ ಪಾಟೀಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.