ಸಿಂಧನೂರು: ನಗರದ ರಾಜೇಂದ್ರಕುಮಾರ ಮೆಮೋರಿಯಲ್ ಶಾಲೆಯಲ್ಲಿ ಮರಕ ಸಂಕ್ರಾಂತಿ ಹಬ್ಬವನ್ನು ಶುಕ್ರವಾರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಡಗರ ಸಂಭ್ರಮದಿಂದ ಆಚರಿಸಿದರು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಶಾಲಾವರಣದಲ್ಲಿ ರಂಗೋಲಿಯಿಂದ ವಿವಿಧ ಕಲಾಕೃತಿಗಳನ್ನು ಬಿಡಿಸಿ, ಅದರಲ್ಲಿ ರಂಗು ರಂಗಿನ ಬಣ್ಣ ತುಂಬಿ ಸಿಂಗರಿಸಿದ್ದರು. ರಂಗೋಲಿಯ ಮಧ್ಯದಲ್ಲಿ ಮಡಿಕೆಯಲ್ಲಿ ಅಕ್ಕಿ ತುಂಬಿ, ಅದರಲ್ಲಿ ಬೆಲ್ಲ ಇಟ್ಟು, ಅದರ ಸುತ್ತಲೂ ಕಬ್ಬಿನ ದಂಟುಗಳನ್ನಿಟ್ಟು, ಚೆಂಡು ಹೂವಿನಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪು ಧರಿಸಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ಜಾನಪದ ಹಾಡುಗಳನ್ನು ಹಾಡುತ್ತಾ, ಹೆಜ್ಜೆ ಹಾಕುತ್ತಾ ಮಕರ ಸಂಕ್ರಾಂತಿ ಹಬ್ಬ ಆಚರಿಸಿದರು.
ಶಾಲೆಯ ಆಡಳಿತಾಧಿಕಾರಿ ಸರಸ್ವತಿ ಪಾಟೀಲ್ ಮಾತನಾಡಿ, ‘ಹಬ್ಬಗಳು ಭಾವೈಕ್ಯತೆಯ ಸಂಕೇತವಾಗಿದ್ದು, ಎಲ್ಲರನ್ನು ಒಗ್ಗೂಡಿಸುವ ಸಾಮರಸ್ಯ ಹೊಂದಿದೆ. ವಿದ್ಯಾರ್ಥಿಗಳಿಗೂ ಸಂಕ್ರಾಂತಿ ಹಬ್ಬಗಳ ಮಹತ್ವ ತಿಳಿಸುವ ಹಿನ್ನೆಲೆಯಲ್ಲಿ ಪ್ರತಿವರ್ಷವೂ ಶಾಲೆಯಲ್ಲಿ ಸಂಕ್ರಾಂತಿ ಆಚರಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.
ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.