ಮಾನ್ವಿ: ‘ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ. ಈ ನಿಟ್ಟಿನಲ್ಲಿ ದಿವಂಗತ ರಾಜಾ ವಸಂತ ನಾಯಕ ಅವರು ನಿರಂತರವಾಗಿ ಕೈಗೊಳ್ಳುತ್ತಿದ್ದ ಪರಿಸರ ಜಾಗೃತಿ ಚಟುವಟಿಕೆಗಳು ಚಿರಸ್ಮರಣೀಯ’ ಎಂದು ರಾಜ್ಯ ಯುವ ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಹೇಳಿದರು.
ಭಾನುವಾರ ಪಟ್ಟಣದಲ್ಲಿ ರಾಜಾ ಹನುಮಪ್ಪ ನಾಯಕ ಸಮಾಜ ಸೇವಾ ಸಂಸ್ಥೆ, ರಾಜಾ ಸಂಜೀವ ನಾಯಕ ಫೌಂಡೇಶನ್ ಹಾಗೂ ಆರ್.ವಿ.ಎನ್ ಗ್ರೂಪ್ ಸಹಯೋಗದಲ್ಲಿ ದಿವಂಗತ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ವಸಂತ ನಾಯಕ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕರಿಗೆ ಸಸಿಗಳ ವಿತರಣೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜಾ ವಸಂತ ನಾಯಕ ಅವರು ರಾಜಕೀಯ ಕ್ಷೇತ್ರದ ಜತೆಗೆ ಶೈಕ್ಷಣಿಕ ಹಾಗೂ ಪರಿಸರ ಜಾಗೃತಿ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಪ್ರತಿ ವರ್ಷ ತಮ್ಮ ಜನ್ಮ ದಿನಾಚರಣೆಯನ್ನು ಸಸಿಗಳ ವಿತರಣೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಂಡದ್ದು ಇತರರಿಗೆ ಮಾದರಿ’ ಎಂದರು.
ಅರಣ್ಯಾಧಿಕಾರಿ ಕೆಂಚಪ್ಪ, ಮುಖಂಡರಾದ ಸೈಯದ್ ಸಜ್ಜಾದ್ ಹುಸೇನ್ ಮತವಾಲೆ, ಸೈಯದ್ ಖಾಲೀದ್ ಖಾದ್ರಿ ಮತ್ತಿತರರು ಮಾತನಾಡಿದರು.
ಸಾರ್ವಜನಿಕರಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಯಿತು.
ಪುರಸಭೆಯ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಿ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೋಗಿ ಹಿಮಾಲಯ ಶಿವಮೂರ್ತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ರಾಜಾ ಹನುಮಪ್ಪ ನಾಯಕ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ ರಾಜಾ ಸುಭಾಷ್ ಚಂದ್ರ ನಾಯಕ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿ ಭೋಗಾವತಿ, ಮುಖಂಡರಾದ ಜಿ.ಶಿವರಾಜ ನಾಯಕ ಬಲ್ಲಟಗಿ, ಜೆ.ಸುಧಾಕರ, ಪಿ.ತಿಪ್ಪಣ್ಣ ಬಾಗಲವಾಡ, ರೌಡೂರು ಮಹಾಂತೇಶ ಸ್ವಾಮಿ, ಅಯ್ಯಪ್ಪ ನಾಯಕ ವಕೀಲ, ರಾಜಾ ಶ್ಯಾಮಸುಂದರ ನಾಯಕ, ರಾಜಾ ಇಂದ್ರಜಿತ್ ನಾಯಕ, ಪಾಷು ಮಾಲ್ದಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.