
ಗಬ್ಬೂರು (ದೇವದುರ್ಗ): ‘ಉತ್ತಮ ದಾಂಪತ್ಯಕ್ಕೆ ಹೊಂದಾಣಿಕೆ ಅಗತ್ಯ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.
ಗ್ರಾಮದ ಬೂದಿ ಬಸವೇಶ್ವರ ಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಾಮೂಹಿಕ ವಿವಾಹ ಬಡವರಿಗೆ ಆರ್ಥಿಕ ಬಲ ನೀಡುತ್ತದೆ. ಸಮ ಸಮಾಜ ನಿರ್ಮಾಣಕ್ಕೆ ಇದು ಸಹಕಾರಿ. ಜಾತಿ ವ್ಯವಸ್ಥೆಯನ್ನು ದೇವರು ಸೃಷ್ಟಿಸಿಲ್ಲ. ಆದರೆ, ಮನುಷ್ಯರು ಜಾತಿ ವ್ಯವಸ್ಥೆ ಸೃಷ್ಟಿಸಿಕೊಂಡು ಅಸಮಾನತೆ ಪೋಷಿಸುತ್ತಿದ್ದಾರೆ. ಇದರಿಂದ ಬಡವರು ಬಡವರಾಗಿಯೇ ಉಳಿದಿದ್ದು, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ’ ಎಂದರು.
ಶಾಸಕಿ ಕರೆಮ್ಮ ಜಿ.ನಾಯಕ ಮಾತನಾಡಿ,‘ಒಬ್ಬರಿಗೆ ಸಿಟ್ಟು ಬಂದಾಗ ಇನ್ನೊಬ್ಬರು ಅನುಸರಿಸಿಕೊಂಡು ಹೋಗಬೇಕು. ಇಬ್ಬರೂ ಸಿಟ್ಟು ಮಾಡಿಕೊಂಡರೆ ಮೂರನೇಯವರ ಪ್ರವೇಶವಾಗುತ್ತದೆ. ಮದುವೆಯ ಆರಂಭದಲ್ಲಿ ಸುಖದಿಂದ ಇದ್ದು, ಬಳಿಕ ವಿರಸ ಮಾಡಿಕೊಳ್ಳಬಾರದು. ಸಮರಸದಿಂದ ಜೀವನ ಸಾಗಿಸಬೇಕು’ ಎಂದು ಹೇಳಿದರು.
ಶಾಸಕ ಶರಣಗೌಡ ಕಂದಕೂರ ಮಾತನಾಡಿ,‘ಈ ಕಾಲದಲ್ಲಿ ಮದುವೆ ಸುಲಭವಲ್ಲ. ಯಾವುದೇ ಕಾರಣಕ್ಕೂ ಬಡವರು ಶ್ರೀಮಂತರನ್ನು ಅನುಸರಿಸಿ, ದುಂದು ವೆಚ್ಚದ ಮದುವೆ ಮಾಡಬಾರದು. ದುಬಾರಿ ಮದುವೆ ಮಾಡಿದ ಬಡವರು ಸಾಲಗಾರರಾಗುತ್ತದೆ’ ಎಂದರು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 152 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ವೆಂಕಟಸಿಂಗ್, ಬೂದಿ ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಬೂದಿಬಸವೇಶ್ವರ ಶಿವಾಚಾರ್ಯರರು, ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು, ನವಲಕಲ್ ಮಠದ ಸೋಮನಾಥ ಶಿವಾಚಾರ್ಯರು, ಗುರುವಿನ ಸಿದ್ದಯ್ಯಸ್ವಾಮಿ, ವಿನಯ ಗುರೂಜಿ, ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಶಾಸಕರಾದ ಬಸನಗೌಡ ದದ್ದಲ್, ಡಾ.ಶಿವರಾಜ ಪಾಟೀಲ, ರಾಜಾ ವೇಣುಗೋಪಾಲ ನಾಯಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ, ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ಮಾಜಿ ಸಂಸದ ಬಿ.ವಿ. ನಾಯಕ, ಮಾಜಿ ಸಚಿವ ಕೆ.ಶಿವನಗೌಡ ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಕಾಂಗ್ರೆಸ್ ಮುಖಂಡ ರವಿ ಬೋಸರಾಜ, ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ ಹಾಗೂ ಶ್ರೀದೇವಿ ನಾಯಕ ಹಾಜರಿದ್ದರು.
ಬಡವರಿಗೆ ಆರ್ಥಿಕ ಬಲ ಸಮರಸದಿಂದ ಜೀವನ ಸಾಗಿಸಿ ದುಂದು ವೆಚ್ಚದ ಮದುವೆ ಬೇಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.