ಮುದಗಲ್: ‘ಮಸ್ಕಿಯ ಮಾಜಿ ಶಾಸಕರಿಂದ ಹಾಗೂ ಸ್ಥಳೀಯ ಮುಖಂಡರಿಂದ ನಮಗೆ ಅನ್ಯಾಯವಾಗುತ್ತಿದೆ‘ ಎಂದು ಮಟ್ಟೂರ ಗ್ರಾಮದಲ್ಲಿ ಗ್ರಾಮಸ್ಥರು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಲ್ಲಿ ದೂರಿದರು.
ಮಸ್ಕಿ ಉಪ ಚುನಾವಣೆ ಕಾರಣದಿಂದಾಗಿ ಬಿ.ವೈ.ವಿಜಯೇಂದ್ರ ಅವರು ಪ್ರಚಾರ ಕಾರ್ಯಕ್ಕಾಗಿ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ಗ್ರಾಮಸ್ಥರ ಬಳಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರ ಪರವಾಗಿ ಮತಯಾಚಿಸುವ ವೇಳೆ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.
‘ನಿಮ್ಮ ಸಲುವಾಗಿ ನಾವು ಮತ ಹಾಕಬೇಕ್ರಿ, ಶಾಸಕ ಮತ್ತು ಸ್ಥಳೀಯ ಮುಖಂಡರ ಮುಖ ನೋಡಿ ಮತ ಹಾಕಲ್ಲರಿ’ ಎಂದು ಗ್ರಾಮಸ್ಥರು ಹೇಳಿದರು.
ಇದೇ ವೇಳೆ ಗ್ರಾಮಸ್ಥರಾದ ಮಾನಪ್ಪ ಬೆಂಚಮಟ್ಟಿ, ಬಸವಂತಪ್ಪ ಹಸಮಕಲ್ ಅವರು, ‘ನಾವು ಕುರುಬರು ನಮ್ಮ ಸಮುದಾಯವನ್ನು ಶಾಸಕರಾಗಿದ್ದವರು ನಿರ್ಲಕ್ಷಿಸಿದ್ದಾರೆ‘ ಎಂದು ಆರೋಪಿಸಿದರು.
ಗೆಲುವಿನ ಹಗಲು ಕನಸು: ಟೀಕೆ
ಕಾಂಗ್ರೆಸ್ ಪಕ್ಷದವರು ಹಣ, ಹೆಂಡದ ಅಮಲಿನಲ್ಲಿ ಗೆಲುವಿನ ಹಗಲು ಕನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಮುದಗಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರನ್ನು ಓಲೈಸಲು ಕಾಂಗ್ರೆಸ್ ಹಣ, ಹೆಂಡದ ಮೊರೆ ಹೋಗುತ್ತಿದೆ. ಈ ಹಿಂದೆ ರಾಜ್ಯದಲ್ಲಿ ನಡೆದ ಉಪಚುನಾವಣೆಗಳ ಫಲಿತಾಂಶ ಈಗಿನ ಉಪಚುನಾವಣೆಗೆ ದಿಕ್ಸೂಚಿಯಾಗಿದೆ ಎಂದರು.
‘ಪಕ್ಷದ ವರಿಷ್ಠರು ನನಗೆ ಮಸ್ಕಿ ಉಪಚುನಾವಣೆಯ ಜವಾಬ್ದಾರಿ ನೀಡಿದ್ದು, ಇಂದಿನಿಂದ ಉಪಚುನಾವಣೆ ಪ್ರಚಾರ ಕಾರ್ಯ ಆರಂಭಿಸಿದ್ದೇನೆ. ಮುದಗಲ್ ಪಟ್ಟಣದಲ್ಲಿಯೇ ವಾಸ್ತವ್ಯ ಮಾಡಿಕೊಂಡು ಮಸ್ಕಿ ಚುನಾವಣೆ ಅಖಾಡದ ಕಾರ್ಯಕ್ರಮ ರೂಪಿಸಲಾಗುವುದು’ ಎಂದರು.
‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರ ಮುಸುಕಿನ ಗುದ್ದಾಟದಿಂದ ಉಪಚುನಾವಣೆಗೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಕೆಲ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ರಾಜ್ಯದ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ’ ಎಂದರು.
ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಮಾನಪ್ಪ ವಜ್ಜಲ್, ಸುರಪುರ ಶಾಸಕ ರಾಜೂಗೌಡ, ಹಾಸನ ಶಾಸಕ ಪ್ರೀತಂ ಗೌಡರು, ಕುರಿ ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಇದ್ದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.