ರಾಯಚೂರು: ಯುವ ಕವಿ ಎಂ.ಬಿ ನರಸಿಂಹಲು ವಡವಾಟಿಯವರು ಶೋಷಿತ, ತಳ ಸಮುದಾಯದ ನೋವು, ಯಾತನೆಗಳು, ತಂದೆ–ತಾಯಿ ಪ್ರೀತಿ, ವಾತ್ಸಲ್ಯ ಅನೋನ್ಯತೆ ಹಾಗೂ ಭಾವನೆಗಳಿಗೆ ಸ್ಪಂದಿಸುವ ಕಾರ್ಯವನ್ನು ತಮ್ಮ ಕವನ ಸಂಕಲನದಲ್ಲಿ ಕಾಣಬಹುದು ಎಂದು ಹಿರಿಯ ಸಾಹಿತಿ ಬಾಬು ಭಂಡಾರಿಗಲ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಭಾನುವಾರ ರಾಯಚೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಎಂ.ಬಿ ನರಸಿಂಹಲು ವಡವಾಟಿ ಅವರ ‘ಮೌನ ಮುರಿದಾಗ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ದಿನನಿತ್ಯದ ಒಡನಾಟ, ಕೌಟುಂಬಿಕ ಸಂದರ್ಶನ, ಸುತ್ತಲಿನ ಪರಿಸರದಲ್ಲಿ ನಡೆಯುವ ಚಲನವಲನಗಳನ್ನು ಕಾವ್ಯ ರೂಪಕ್ಕೆ ಇಳಿಸಿದ್ದಾರೆ. ಅವರ ವಸ್ತು ವಿಷಯ ಆಯ್ಕೆ ಶಕ್ತಿಯುತ ವಾಗಿದೆ. ಇಂದಿನ ಯುವ ಸಾಹಿತಿಗೆ ಮಾದರಿಯಾಗಿದ್ದಾರೆ ಎಂದರು.
ಸಾಹಿತಿ ಕೊರೆನಲ್ ಅವರು ಪುಸ್ತಕ ಕುರಿತು ಮಾತನಾಡಿ, ದೇಶದಲ್ಲಿ ಇಂದು ಮಾಂಸಹಾರಿಗಳನ್ನು ಭಯೋತ್ಪಾದ ಕರು, ಕ್ರೂರಿಗಳಾಗಿ ಬಿಂಬಿಸಲಾಗುತ್ತಿದೆ. ಆದರೆ ಬಹುಸಂಖ್ಯಾತರು ಮಾಂಸ ಹಾರಿ ಆಗಿದ್ದಾರೆ. ಒಂದು ಜೀವಿ ಬದುಕಲು ಇನ್ನೊಂದು ಜೀವಿಯನ್ನು ಕೊಲ್ಲಲೇ ಬೇಕು ಇದು ಪ್ರಕೃತಿ ನಿಯಮ ಎಂದರು.
ರಾಯಚೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ಕಾವ್ಯ ಬಹುಮುಖಿ, ಬಹುತ್ವ ಚಿಂತನೆಗಳನ್ನು ಇಟ್ಟುಕೊಂಡು ಬರೆದ ಕವಿ ಈ ದೇಶದ ಉತ್ತಮ ಕವಿಯಾಗಲಿಕ್ಕೆ ಸಾಧ್ಯ. ಸಮಾಜದ ನೋವುಗಳಿಗೆ, ನಾಡಿನ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಕಾವ್ಯಕ್ಕಿದ್ದರೆ ಅದು ಉತ್ತಮ ಕಾವ್ಯವಾಗುತ್ತದೆ ಎಂದು ಹೇಳಿದರು.
ಹಿರಿಯ ಸಾಹಿತಿ ಭಗತ್ ರಾಜ ನಿಜಾಮಕಾರಿ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತಾಯರಾಜ್ ಮರ್ಚೇಟ್ಹಾಳ್, ಯುವಕವಿ ಈರಣ್ಣ ಬೆಂಗಾಲಿ, ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ಬಶೀರ್ ಅಹ್ಮದ್ ಹೊಸಮನಿ, ಯುವಕವಿ ಯಲ್ಲಪ್ಪ ಮರ್ಚೇಡ್, ಸಾಹಿತಿ ವೀರ ಹನುಮಾನ್ ಆಂಜನೇಯ ಜಾಲಿಬೆಂಚಿ, ಎಚ್ಎಚ್ ಮ್ಯಾದರ್, ವಿ.ಎನ್.ಅಕ್ಕಿ, ರೇಖಾ ಬಡಿಗೇರ, ರಾಜಶಂಕರ್ ಇದ್ದರು.
ದೇವೇಂದ್ರ ಕಟ್ಟಿಮನಿ ಪ್ರಾರ್ಥಿಸಿದರು. ದಂಡಪ್ಪ ಬಿರಾದಾರ ಸ್ವಾಗತಿಸಿದರು. ವಿಜಯರಾಜೇಂದ್ರ ನಿರೂಪಿಸಿದರು. ರಾಹುತ್ ರಾವ್ ಬರೂರು ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.