ಮುದಗಲ್: ಸಿಡಿಮದ್ದು ಸ್ಪೋಟಗೊಂಡು ಕಾರ್ಮಿಕರೊಬ್ಬರು ಮೃತಪಟ್ಟ ಮಾಕಾಪುರ ಗ್ರಾಮದ ಕಲ್ಲು ಕ್ವಾರಿಗೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿಡಿಮದ್ದು ಸ್ಫೊಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಮಾಲೀಕರಾದ ಬಾಲನಗೌಡ, ವೆಂಕನಗೌಡ, ವ್ಯವಸ್ಥಾಪಕ ವಿಶ್ವನಾಥ ಪಾಟೀಲ ಅವರನ್ನ ಬಂಧಿಸಲಾಗಿದೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮಾಡುತ್ತೇವೆ. ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಹಕಾರ ಕೋರತ್ತೇವೆ’ ಎಂದು ತಿಳಿಸಿದರು.
ಕಲಬುರಗಿ ವಿಭಾಗದ ಬಾಂಬ್ ನಿಷ್ಕ್ರಿಯ ದಳದ ತಂಡ ಮಾಕಾಪುರ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಸ್ಪೋಟದ ತನಿಖೆ ಕೈಗೊಂಡಿತು. ಸಿಪಿಐ ಬಾಲಚಂದ್ರ ಲಕ್ಕಂ, ಪಿಎಸ್ಐ ವೆಂಕಟೇಶ ಮಾಡಗೇರಿ ಸೇರಿದಂತೆ ಸಿಬ್ಬಂದಿ ಇದ್ದರು.
ಮಾಕಾಪುರ ಗ್ರಾಮದ ಮಲ್ಲನಗೌಡ ಅವರ ಕಲ್ಲು ಕ್ವಾರಿಯಲ್ಲಿ ಶನಿವಾರ ಕಾರ್ಮಿಕ ವೆಂಕಟೇಶ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.