ಮಸ್ಕಿ: ಪಟ್ಟಣದ ವಾರ್ಡ್ ಸಂಖ್ಯೆ–1ರ ಬಸವೇಶ್ವರ ನಗರದಲ್ಲಿ ಆರಂಭಗೊಂಡ ಅಮೃತ 2.0 ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿಯಿಂದಾಗಿ ರಸ್ತೆಗಳು ಹಾಳಾಗಿವೆ. ಇದರಿಂದ ಸ್ಥಳೀ ಯ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಲು ಅಗೆದ ರಸ್ತೆಗಳು ಕೆಸರು ಗದ್ದೆಗಳಂತಾಗಿವೆ. ರಸ್ತೆ ಮೇಲೆ ಸವಳು ಮಣ್ಣು ಬಿದ್ದಿದ್ದರಿಂದ ಬೈಕ್ ಸವಾರರು ಬೈಕ್ ಚಲಾಯಿಸಲು ಪರದಾಡುತ್ತಿದ್ದಾರೆ. ಕಾರು ಹಾಗೂ ಇತರ ವಾಹನಗಳು ಗುಂಡಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿವೆ. ಸಿಕ್ಕಿ ಹಾಕಿಕೊಂಡ ವಾಹನಗಳನ್ನು ಎತ್ತಲು ವಾಹನಗಳ ಮಾಲೀಕರು ಹರಸಾಹಸಪಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಬಸವೇಶ್ವರ ನಗರದಲ್ಲಿ ಕುಡಿಯುವ ನೀರಿನ ವಾಹನ, ಪುರಸಭೆಯ ಕಸ ಸಂಗ್ರಹಿಸುವ ವಾಹನ, ಹಾಲಿನ ವಾಹನದವರು ಈ ರಸ್ತೆ ಮೇಲೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬಂದರೆ ರಸ್ತೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ ಎನ್ನುವ ಭಯದಿಂದ ದೂರದಲ್ಲಿಯೇ ನಿಲ್ಲಿಸುತ್ತಿದ್ದಾರೆ. ಮಹಿಳೆಯರು ವಾಹನಗಳು ನಿಂತಲ್ಲಿಯೇ ಹೋಗಿ ಅಗತ್ಯ ವಸ್ತುಗಳನ್ನು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ.
ಹಾಳಾದ ರಸ್ತೆಯಲ್ಲಿ ಮರಂ ಹಾಕಿ ತಾತ್ಕಾಲಿಕವಾಗಿ ತಿರುಗಾಡಲು ಅವಕಾಶ ಮಾಡಿಕೊಡಿ ಎಂದು ಪುರಸಭೆಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಈ ಕಡೆ ಗಮನ ಕೊಡುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಶಾಸಕರು ಹಾಗೂ ಸ್ಥಳೀಯ ಪುರಸಭೆ ಆಡಳಿತ ಈ ಕಡೆ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.