ರಾಯಚೂರು: ಹೊಸ ಗರ್ಭನಿರೋಧಕ ಕುರಿತು ವೈದ್ಯಾಧಿಕಾರಿಗಳು ಹಾಗೂ ಶ್ರೂಶಷಾಧಿಕಾರಿಗಳಿಗೆ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು.
ಕುಟುಂಬ ಕಲ್ಯಾಣ ವಿಭಾಗದ ಉಪ ನಿರ್ದೇಶಕಿ ಡಾ.ಚಂದ್ರಿಕಾ ಬಿ. ಆರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ತಾಯಿ ಮತ್ತು ಮಕ್ಕಳ ಆರೋಗ್ಯ ಸರಿಯಾಗಿರಲು ಕುಟುಂಬ ಕಲ್ಯಾಣ ಕಾರ್ಯಕ್ರಮ ಅವಶ್ಯಕತೆಯಿದೆ. ಒಂದು ಮಗುವಿನಿಂದ ಮತ್ತೊಂದು ಮಗುವಿನ ಹೆರಿಗೆ ನಡುವೆ ಅಂತರ ಕಡಿಮೆ ಇದ್ದಲ್ಲಿ ಅದರಿಂದ ಮಹಿಳೆಯರಿಗೆ ರಕ್ತಹೀನತೆಯಾಗಿ ತಾಯಿ ಹಾಗೂ ಶಿಶುವಿನ ಜೀವಕ್ಕೆ ಆಪಾಯವಾಗುವುದನ್ನು ತಡೆಗಟ್ಟಲು ಅಂತರ ಇಂಜೆಕ್ಷನ್ ಬಳಸುವುದು ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.
ಹೆರಿಗೆಯಾದ 6 ವಾರಗಳ ನಂತರ ಈ ಇಂಜೆಕ್ಷನ್ ಪಡೆಯಬಹುದಾಗಿದೆ. ಇದರಿಂದ ಒಂದು ಮಗುವಿನಿಂದ ಮತ್ತೊಂದು ಮಗುವಿಗಾಗಿ ಗರ್ಭಧರಿಸಲು ಅಂತರವನ್ನು ಕಾಪಾಡಿಕೊಳ್ಳಲು ತುಂಬಾ ಉಪಯುಕ್ತವಾಗಿದೆ. ಈ ಅಂತರದ ಇಂಜೆಕ್ಷನ್ ಅನ್ನು ಪ್ರತಿ 3 ತಿಂಗಳಿಗೆ ಒಂದು ಬಾರಿ ಮಾಡಿಸಿಕೊಳ್ಳಬಹುದು ಎಂದು ಹೇಳಿದರು.
ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಯಾದ ಅರ್ಹ ಫಲಾನುಭವಿಗಳ ಪೈಕಿ ಸಾಂಕೇತಿಕವಾಗಿ 6 ಜನ ತಾಯಂದಿರರಿಗೆ ಇಂಜೆಕ್ಷನ್ ನೀಡಲಾಯಿತು. ನಂತರ ವೈದ್ಯಾಧಿಕಾರಿಗಳಿಗೆ ಹಾಗೂ ಶುಶ್ರೂಷಾಧಿಕಾರಿಗಳಿಗೆ ಅಂತರ ಇಂಜೆಕ್ಷನ್ ಕುರಿತು ತರಬೇತಿ ನೀಡಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು ಪ್ರಾಸ್ತಾವಿಕ ಮಾತನಾಡಿ, ‘ಕುಟುಂಬ ಕಲ್ಯಾಣ ಯೋಜನೆಯ ವಿಧಾನಗಳಾದ ತಾತ್ಕಾಲಿಕ ವಿಧಾನದ ಇಂಜೆಕ್ಷನ್ ತುಂಬಾ ಸರಳ ಮತ್ತು ಸುರಕ್ಷಿತವಾಗಿದೆ. ಮಹಿಳೆಯರು ಇದನ್ನು ಪಡೆಯುವುದರಿಂದ ಅಂತರದ ಹೆರಿಗೆ ಕಾಪಾಡಬಹುದು ಎಂದರು.
ಅಂತರ ಇಂಜೆಕ್ಸನ್ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಯಂದಿರಿಗೆ ಸಲಹೆ ಮಾಡಿದರು.
ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಕುಮಾರ, ಸ್ತ್ರೀರೋಗ ತಜ್ಞೆ ಶ್ರೀಲತಾ ಪಾಟೀಲ, ಡಾ.ಮಯಾಂಕ, ಸಲಹೆಗಾರರಾದ ಸತೀಶ , ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.