ರಾಯಚೂರು: ತಾಲ್ಲೂಕಿನ ಗೋನಾಳ ಹತ್ತಿರ ನಾರಾಯಣಪುರ ಬಲದಂಡೆ ಕಾಲುವೆ (ಎನ್ಆರ್ಬಿಸಿ)ಯ ವಿತರಣಾ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಹರಿದಿದ್ದರಿಂದ, ನೂರಾರು ಎಕರೆ ಜಮೀನಿನ ಫಲವತ್ತಾದ ಮಣ್ಣು ಬೆಳೆಸಹಿತ ಕೊಚ್ಚಿಕೊಂಡು ಹೋಗಿದೆ.
ವೆಂಕಟಾಪುರ, ಗೋನಾಳ ಹಾಗೂ ರಘುನಾಥಹಳ್ಳಿ ಗ್ರಾಮಗಳ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಮಳೆ ಕೊರತೆಯಿಂದ ಬೆಳೆಗಳು ಬಾಡುವ ಸ್ಥಿತಿಯಲ್ಲಿದ್ದವು. ಇದೀಗ ಬೆಳೆ ಮತ್ತು ಜಮೀನು ಎರಡೂ ಹೋಗಿವೆ ಎಂದು ರೈತರು ಅಳಲು ವ್ಯಕ್ತಪಡಿಸುತ್ತಿದ್ದಾರೆ.
‘ಎನ್ಆರ್ಬಿಸಿ 95 ವಿತರಣಾ ಕಾಲುವೆಯು 125 ಕಿಲೋ ಮೀಟರ್ ಹರಿಯುತ್ತದೆ. ಕಾಲುವೆ ಇನ್ನೂ ನಿರ್ಮಾಣ ಹಂತದಲ್ಲಿದ್ದು, ನೀರು ಹರಿಸುವ ಅಗತ್ಯ ಇರಲಿಲ್ಲ. ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದ ಜಮೀನುಗಳು ಹಾಳಾಗಿವೆ. ಕೂಡಲೇ ಪರಿಹಾರ ಕೊಡದಿದ್ದರೆ, ಜಿಲ್ಲಾಧಿಕಾರಿ ಕಚೇರಿ ಎದುರು ನಷ್ಟದಲ್ಲಿರುವ ರೈತರೊಂದಿಗೆ ಉಪವಾಸ ಆರಂಭಿಸಬೇಕಾಗುತ್ತದೆ’ ಎಂದು ರೈತ ಮುಖಂಡ ಲಕ್ಷ್ಮಣಗೌಡ ಕಡಗಂದೊಡ್ಡಿ ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.