ರಾಯಚೂರು: ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವುದು ಅತಿ ಅವಶ್ಯವಾಗಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಹೇಳಿದರು.
ರಾಯಚೂರು ವಿಶ್ವವಿದ್ಯಾಲಯ ಹಾಗೂ ತಮಿಳುನಾಡಿನ ತಿರುಚಿನಾಪಳ್ಳಿಯ ಮಹಿಂದ್ರಾ ಫೈನಾನ್ಸ್ ಎಂಪವರ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶ ಹಾಗೂ ಮಹಿಂದ್ರಾ ಫೈನಾನ್ಸ್ ಎಂಪವರ್ ಟ್ರಸ್ಟ್ ಸಹಯೋಗದಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಭಾಗದಲ್ಲಿ ಬಿಸಿಲು ಹಾಗೂ ಅತಿ ಬಿಸಿಲುಕಾಲ ಎಂಬ ಮಾತಿದ್ದು, ರಾಯಚೂರು ವಿಶ್ವವಿದ್ಯಾಲಯವನ್ನು ಹಸಿರು ಕ್ಯಾಂಪಸ್ನ್ನಾಗಿಸಲು ಉದ್ದೇಶವಿದೆ. ಈ ಗುರಿ ತಲುಪಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಮಹಿಂದ್ರಾ ಫೈನಾನ್ಸ್ ಎಂಪವರ್ ಟ್ರಸ್ಟ್ ಅವರು ಉಚಿತ ಸಸಿ ನೆಡುವ ಕಾರ್ಯಕ್ರಮಗಳ ಜೊತೆಗೆ ಇನ್ನಿತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಮ್ಮ ವಿಶ್ವವಿದ್ಯಾಲಯ ಸಂಯೋಜನೆಗೊಳ್ಳಲು ಬಯಸುತ್ತಿದೆ. ಇದಕ್ಕಾಗಿ ಟ್ರಸ್ಟ್ ಅಧಿಕಾರಿಗಳಿಗೆ ಒಡಂಬಡಿಕೆ ಮಾಡಿಕೊಳ್ಳಲು ಇಚ್ಛಿಸುತ್ತೇವೆ ಎಂದು ಹೇಳಿದರು.
ಪ್ರಸ್ತುತ ದಿನಮಾನದಲ್ಲಿ ಪರಿಸರ ಸಂರಕ್ಷಣೆ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಹೊಣೆಗಾರಿಕೆಯಾಗಿದೆ. ಕೇವಲ ಸಸಿ ನಡುವುದಷ್ಟೆ ಅಲ್ಲ ಸಸಿಗಳನ್ನು ಪೋಷಿಸುವ ಕೆಲಸ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಎನ್.ಎಸ್.ಎಸ್.ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಜಿ.ಎಸ್.ಬಿರಾದಾರ ಮಾತನಾಡಿದರು.
ತಮಿಳುನಾಡಿನ ತಿರುಚಿನಾಪಳ್ಳಿಯ ಮಹಿಂದ್ರಾ ಫೈನಾನ್ಸ್ ಎಂಪವರ್ ಟ್ರಸ್ಟ್ ರಾಜ್ಯ ಸಂಪನ್ಮೂಲ ಅಧಿಕಾರಿ ಕಾರ್ತಿಕೆಯನ್ ಷಣ್ಮುಗಂ ಹಾಗೂ ಸಂಸ್ಥಾಪಕ ನಿರ್ದೇಶಕಿ ಡಾ.ಪಿ.ಕನ್ನಿಮೋಳಿ ಅವರು ರಾಯಚೂರು ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶಕ್ಕೆ ಒಂದು ಸಾವಿರ ಮಹಾಘನಿ ಸಸಿಗಳನ್ನು ನೀಡಿದರು.
ಕುಲಸಚಿವ ಪ್ರೊ.ವಿಶ್ವನಾಥ ಎಂ., ಮೌಲ್ಯಮಾಪನ ಕುಲಸಚಿವ ಪ್ರೊ.ಯರಿಸ್ವಾಮಿ, ವಿವಿಯ ಸಿಂಡಿಕೇಟ್ ಸದಸ್ಯ ಡಾ.ಶಿವಬಸಪ್ಪ ಮಾಲಿಪಾಟೀಲ, ಶಂಕರರೆಡ್ಡಿ, ಕಾವೇರಿ ಕೆಧಾರ್ನಾಥ್, ಮೋಹನ್ ಕುಮಠಕರ್, ವೈ.ಎಂ.ಭಜಂತ್ರಿ, ನಾಗೇಂದ್ರ ಪ್ರಸಾದ, ಜಗದೀಶ ಇದ್ದರು.
ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಪದ್ಮಜಾ ದೇಸಾಯಿ ನಿರೂಪಿಸಿದರು. ಬಜಾರಪ್ಪ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.