ADVERTISEMENT

ರಾಯಚೂರು: ಅತಿವೃಷ್ಟಿ, ಬೆಲೆ ಕುಸಿತದಿಂದ ನಲುಗಿದ ರೈತರು

ಎಪಿಎಂಸಿ ಆವರಣದಲ್ಲೇ ಕೊಳೆಯುತ್ತಿದೆ ಈರುಳ್ಳಿ: ಬೆಳೆ ನಷ್ಟ ಪರಿಹಾರ ವಿತರಣೆಗೆ ಮನವಿ

ಚಂದ್ರಕಾಂತ ಮಸಾನಿ
Published 7 ಅಕ್ಟೋಬರ್ 2025, 5:40 IST
Last Updated 7 ಅಕ್ಟೋಬರ್ 2025, 5:40 IST
<div class="paragraphs"><p>ರಾಯಚೂರಿನ ಎಪಿಎಂಸಿ ಆವರಣದಲ್ಲಿ ಕೊಳೆತ ಈರುಳ್ಳಿ ಬೇರ್ಪಡಿಸುತ್ತಿರುವ ರೈತರು</p></div>

ರಾಯಚೂರಿನ ಎಪಿಎಂಸಿ ಆವರಣದಲ್ಲಿ ಕೊಳೆತ ಈರುಳ್ಳಿ ಬೇರ್ಪಡಿಸುತ್ತಿರುವ ರೈತರು

   

ಚಿತ್ರ: ಶ್ರೀನಿವಾಸ ಇನಾಂದಾರ್

ರಾಯಚೂರು: ಈ ವರ್ಷ ಉತ್ತಮ ಆದಾಯ ಬರಲಿದೆ ಎನ್ನುವ ವಿಶ್ವಾಸದಿಂದ ಈರುಳ್ಳಿ ಬೆಳೆದಿದ್ದ ಜಿಲ್ಲೆಯ ಈರುಳ್ಳಿ ಬೆಳೆಗಾರರು ಅತಿವೃಷ್ಟಿ ಹಾಗೂ ಬೆಲೆ ಕುಸಿತದಿಂದ ನಲುಗಿದ್ದಾರೆ.

ADVERTISEMENT

ಅತಿವೃಷ್ಟಿ ರೈತರ ಬದುಕಿಗೆ ಬರೆ ಇಟ್ಟರೆ, ಬೆಲೆ ಕುಸಿತ ತೀವ್ರ ಆತಂಕ ತಂದಿದೆ. ರೈತರು ಈರುಳ್ಳಿ ಬೆಳೆಯಲು ಹೊಲದಲ್ಲಿ ಮಾಡಿದ ಖರ್ಚು ಕೂಡ ಕೈ ಸೇರುತ್ತಿಲ್ಲ. ಕಳೆದ ವರ್ಷ ಉತ್ತಮ ಬೆಲೆ ಸಿಕ್ಕಿದ್ದರಿಂದ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿದ್ದರು. ರಾಯಚೂರು ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಳೆ ಕಡಿಮೆ. ಈರುಳ್ಳಿ ಬೆಳೆದರೆ ಆದಾಯ ಇಮ್ಮಡಿಗೊಳ್ಳಲಿದೆ ಎನ್ನುವ ರೈತರ ವಿಶ್ವಾಸ ಮಣ್ಣುಪಾಲಾಗಿದೆ.

ಅರ್ಧ ಬೆಳೆಯನ್ನು ಮಾರುಕಟ್ಟೆಗೆ ತಂದರೂ ಹಸಿಯಾಗಿರುವ ಕಾರಣ ಕೊಳ್ಳುವವರು ಮುಂದೆ ಬರುತ್ತಿಲ್ಲ. ರೈತರು ಎಪಿಎಂಸಿ ಆವರಣದಲ್ಲಿ ಈರುಳ್ಳಿ ಒಣ ಹಾಕಿ ಖರೀದಿದಾರರಿಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಕಟಾವು ಮಾಡಿದ ಈರುಳ್ಖಿಯೇ ಮಾರಾಟವಾಗಿಲ್ಲ. ಹೀಗಾಗಿ ಹೊಲದಲ್ಲಿ ಬಾಕಿ ಉಳಿದಿರುವ ಈರುಳ್ಳಿ ಹಾಗೆಯೇ ಉಳಿದುಕೊಂಡು ಕೊಳೆಯಲಾರಂಭಿಸಿದೆ.

‘ರಾಯಚೂರು ಎಪಿಎಂಸಿಗೆ 60 ಚೀಲ ಈರುಳ್ಳಿ ತಂದಿರುವೆ. ಎರಡು ಎಕರೆ ಜಮೀನಿನಲ್ಲಿ ಅಂದಾಜು 120 ಚೀಲ ಈರುಳ್ಳಿ ಬೆಳೆದಿದೆ. ಅತಿವೃಷ್ಟಿಯಿಂದಾಗಿ ಒಂದು ಎಕರೆಯಲ್ಲಿನ 60 ಚೀಲ ಈರುಳ್ಳಿ ಹೊಲದಲ್ಲೇ ಹಾಳಾಗಿದೆ’ ಎಂದು ಲಿಂಗಸುಗೂರು ತಾಲ್ಲೂಕಿನ ಐದಬಾವಿಯ ರೈತ ಸಾಬಣ್ಣ ತಿಳಿಸಿದರು.

‘ಒಂದು ಚೀಲ ಈರುಳ್ಳಿ ಕಟಾವು ಮಾಡುವ ಕೃಷಿ ಕಾರ್ಮಿಕರ ಕೂಲಿಯೇ ₹ 600 ಇದೆ. ಸಾಗಣೆ ವೆಚ್ಚ ಪ್ರತ್ಯೇಕ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದ ರೈತರಿಗೆ ಮಾಡಿದ ಖರ್ಚೂ ಬಾರದಂತಾಗಿದೆ’ ಎಂದು ಅಳಲು ತೋಡಿಕೊಂಡರು.

ರಾಯಚೂರಿನ ಎಪಿಎಂಸಿ ಆವರಣದಲ್ಲಿ ಎಸೆಯಲಾಗಿರುವ ಕೊಳೆತ ಈರುಳ್ಳಿ
ಈರುಳ್ಳಿ ಬೆಲೆ ಕುಸಿತದಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈರುಳ್ಳಿ ಹಸಿಯಾಗಿರುವ ಕಾರಣ ಖರೀದಿದಾರರು ಈರುಳ್ಳಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ
ಸಾಬಣ್ಣ ರೈತ

800 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ

‘ರಾಯಚೂರು ಜಿಲ್ಲೆಯಲ್ಲಿ 800 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ರಾಯಚೂರು ಲಿಂಗಸುಗೂರು ಹಾಗೂ ಮುದಗಲ್‌ ವ್ಯಾಪ್ತಿಯಲ್ಲೇ ಹೆಚ್ಚಿನ ರೈತರು ಬೆಳೆದಿರುವ ಈರುಳ್ಳಿ ಅತಿವೃಷ್ಟಿಯಿಂದ ಹಾಳಾಗಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಮ್ಮದ್‌ ಅಲಿ ತಿಳಿಸಿದರು. ‘ಜಿಲ್ಲಾ ಉಸ್ತುವಾರಿ ಸಚಿವರು ಕಂದಾಯ ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಎಂಟು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಬೆಳೆ ಹಾನಿ ಸಮೀಕ್ಷೆ ನಡೆಯುತ್ತಿದೆ’ ಎಂದು ಹೇಳಿದರು.

243.5 ಕ್ವಿಂಟಲ್ ಈರುಳ್ಳಿ ಆವಕ

ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಕ್ಟೋಬರ್ 4ರಂದು 87.5 ಕ್ವಿಂಟಲ್ ಈರುಳ್ಳಿ ಬಂದಿತ್ತು. ಶನಿವಾರ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹ 705 ಹಾಗೂ ಗರಿಷ್ಠ ₹1196ಕ್ಕೆ ಮಾರಾಟವಾಗಿದೆ. ಸೋಮವಾರ 243.5 ಕ್ವಿಂಟಲ್ ಈರುಳ್ಳಿ ಮಾರುಕಟ್ಟೆಗೆ ಆವಕವಾಗಿದೆ. ಈರುಳ್ಳಿ ಕನಿಷ್ಠ ₹ 665 ಹಾಗೂ ಗರಿಷ್ಠ ₹1320ಕ್ಕೆ ಮಾರಾಟವಾಗಿದೆ. ಈರುಳ್ಳಿ ಮಾದರಿ ದರ ಸೋಮವಾರ ₹920 ಇತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.