ರಾಯಚೂರು: ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜಾರಿ ನಿರ್ದೇಶನಾಲಯ ಹಾಗೂ ಇತರೆ ಸರ್ಕಾರದ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸರ್ಕಾರವನ್ನು ವಿರೋಧಿಸುವ ವ್ಯಕ್ತಿಗಳು, ಸಂಸ್ಥೆಗಳ ಹಾಗೂ ಸಂಘಟನೆಗಳ ವಿರುದ್ಧ ಜಾರಿ ನಿರ್ದೇಶನಾಲಯ ಮತ್ತು ಇತರೆ ಸರ್ಕಾರಿ ಏಜೆನ್ಸಿಗಳನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈಚೆಗೆ ವಿವಿಧ ಭಾಗಗಳಿಂದ ಪಾಪ್ಯೂಲರ್ ಫ್ರಂಟ್ ನಾಯಕರ ನಿವಾಸಗಳು ಹಾಗೂ ಕಚೇರಿಗಳ ಮೇಲೆ ನಡೆಸುತ್ತಿದೆ. ದಾಳಿ ಮತ್ತು ಶೋಧಗಳು ಸ್ವತಂತ್ರವಾಗಿ ಕಾರ್ಯ ಮಾಡುತ್ತಿಲ್ಲ. ಬಿಜೆಪಿ ಇವುಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ದೂರಿದರು.
ಬಿಜೆಪಿ ಸಿದ್ಧಾಂತದ ವಿರುದ್ಧ ರಾಜಿ ಇಲ್ಲದ ನಿಲುವು ಹೊಂದಿರುವ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ವನ್ನು ಭೇಟೆಯಾಡುತ್ತಿದೆ. ಮುಸ್ಲಿಂ ಹಾಗೂ ತುಳಿತಕ್ಕೆ ಒಳಗಾದ ಸಮುದಾಯದ ಸಬಲೀಕರಣಕ್ಕಾಗಿ ಸಂಘಟನೆ ದುಡಿಯುತ್ತಿದ್ದು, ಸಾರ್ವಜನಿಕರ ದೇಣಿಗೆ ಆಧಾರದ ಮೇಲೆ ಇದ್ದು ಹಣಕಾಸಿನ ವ್ಯವಹಾರಕ್ಕೆ ಸಂಬಂಧ ಸರ್ಕಾರಿ ನಿಯಮ ಪಾಲನೆ ಮಾಡುತ್ತಿದೆ. ಆರ್ ಎಸ್ ಎಸ್ ಹಾಗೂ ಬಿಜೆಪಿ ಹಿತಾಸಕ್ತಿಯ ಪರವಾಗಿ ಕೆಲಸ ಮಾಡುವ ರಾಜಕೀಯ ಗುಂಪುಗಳು, ಎನ್ ಜಿಓ ಗಳನ್ನು ಪ್ರಶ್ನಿಸುವ ಧೈರ್ಯ ಜಾರಿ ನಿರ್ದೇಶನಾಲಯ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಜಾರಿ ನಿರ್ದೇಶನಾಲಯ ಹಾಗೂ ಇತರೆ ಸರ್ಕಾರಿ ಸಂಸ್ಥೆಗಳು ಆಡಳಿತಾರೂಢ ಸರ್ಕಾರ, ಆರ್ ಎಸ್ ಎಸ್ ಯಾವುದೇ ಸಂಘಟನೆ ಅಥವಾ ಯಾವುದೇ ವ್ಯಕ್ತಿ ಪರ ಕೆಲಸ ಮಾಡದೇ ಸ್ವತಂತ್ರ, ಸಂವಿಧಾನ ಹಾಗೂ ಕಾನೂನಿನ ನಿಯಮದಡಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್, ಕಾರ್ಯದರ್ಶಿ ಅಸೀಮ್ ಸರ್ಕಾಝಿ, ಜಿಲಾನಿ, ಗಫ್ಫರ್, ದಾವೂದ್, ಆಝರ್, ಖದೀರ್, ಜಾವೀದ್ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.