ರಾಯಚೂರು: ಬೆಳಗಾವಿ, ರಾಯಚೂರು ಹಾಗೂ ನೆರೆಯ ತೆಲಂಗಾಣ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಒಂದು ವಾರ ನಿರಂತರವಾಗಿ ಮಳೆ ಸುರಿದ ಕಾರಣ ತರಕಾರಿ ಬೆಳೆ ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಹಾಳಾಗಿದೆ. ಮಾರುಕಟ್ಟೆಗೆ ಆವಕ ಕಡಿಮೆಯಾಗಿ ತರಕಾರಿ ಬೆಲೆ ಹೆಚ್ಚಾಗಿದೆ.
ಪ್ರತಿ ಕ್ವಿಂಟಲ್ಗೆ ಮೆಣಸಿನಕಾಯಿ, ಹಿರೇಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಡೊಣ ಮೆಣಸಿನಕಾಯಿ, ಹೂಕೋಸು, ಗಜ್ಜರಿ, ಬೀಟ್ರೂಟ್, ತುಪ್ಪದ ಹಿರೇಕಾಯಿ, ಚವಳೆಕಾಯಿ, ಸೌತೆಕಾಯಿ ಹಾಗೂ ಬೀನ್ಸ್ ₹2 ಸಾವಿರ, ಎಲೆಕೋಸು ₹ 1 ಸಾವಿರ, ಟೊಮೆಟೊ, ಆಲೂಗಡ್ಡೆ ಹಾಗೂ ಈರುಳ್ಳಿ ಬೆಲೆ ₹500 ಹೆಚ್ಚಳವಾಗಿದೆ.
ತರಕಾರಿ ರಾಜ ಬದನೆಕಾಯಿ ಬೆಲೆ ಮಾತ್ರ ₹ 1 ಸಾವಿರ ಕಡಿಮೆಯಾಗಿದೆ. ಬೆಳ್ಳುಳ್ಳಿ ಬೆಲೆ ಸ್ಥಿರವಾಗಿದ್ದು, ಪ್ರತಿ ಕೆಜಿಗೆ ₹120ರಂತೆ ಮಾರಾಟವಾಗುತ್ತಿದೆ. ಅಡುಗೆ ಸ್ವಾದ ಹೆಚ್ಚಿಸಲು ಬೆಳ್ಳುಳ್ಳಿ ಬಳಸುವುದು ಸಾಮಾನ್ಯ. ಹೀಗಾಗಿ ಬೆಲೆ ಏರಿದರೂ ಕೊಂಡುಕೊಳ್ಳವವರ ಸಂಖ್ಯೆ ಕಡಿಮೆಯಾಗಿಲ್ಲ.
ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಎಂದಿನಂತೆ ನಾಸಿಕ್ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತ್ತಂಬರಿ, ಮೆಂತೆ ಸೊಪ್ಪು ಹಾಗೂ ರಾಯಚೂರು ಗ್ರಾಮಾಂತರ ಪ್ರದೇಶದಿಂದ ಹಿರೇಕಾಯಿ, ಗಜ್ಜರಿ, ಅವರೆಕಾಯಿ, ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಬಂದಿದೆ.
‘ಮೇ ಮೂರನೇ ವಾರದಲ್ಲಿ ಅಧಿಕ ಬಿಸಿಲು ಇದ್ದ ಕಾರಣ ತರಕಾರಿ ಒಣಗಲು ಶುರುವಾಗಿತ್ತು. ಒಂದು ವಾರದ ಅವಧಿಯಲ್ಲಿ ಹಮಾನದಲ್ಲಿ ಬದಲಾವಣೆಯಾಗಿದೆ. ಮಳೆ ಅಬ್ಬರಿಸಿ ತೋಟಗಳಲ್ಲಿ ಬೆಳೆ ಹಾಳಾಗಿದೆ. ಕೆಲವು ಕಡೆ ನೆಲ ಕಚ್ಚಿದೆ. ಹೀಗಾಗಿ ಕೆಲ ತರಕಾರಿಗಳ ಬೆಲೆ ಹೆಚ್ಚಾಗಿದೆ’ ಎಂದು ತರಕಾರಿ ವ್ಯಾಪಾರಿ ಮಾರೆಪ್ಪ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.