ADVERTISEMENT

ಮೇ 7ಕ್ಕೆ ರಾಯಚೂರಿನಲ್ಲಿ ಪ್ರತಿಭಟನಾ ಸಮಾವೇಶ 

ಸುದ್ದಿಗೋಷ್ಠಿಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2025, 14:40 IST
Last Updated 4 ಮೇ 2025, 14:40 IST
ಹಂಪನಗೌಡ ಬಾದರ್ಲಿ
ಹಂಪನಗೌಡ ಬಾದರ್ಲಿ   

ಸಿಂಧನೂರು: ಕಾಂಗ್ರೆಸ್ ಪಕ್ಷದಿಂದ ಮೇ 7ರಂದು ರಾಯಚೂರಿನ ಮಹಾತ್ಮಗಾಂಧಿ ಕ್ರೀಡಾಂಗಣದ ಮೈದಾನದಲ್ಲಿ ‘ಸಂವಿಧಾನ ಬಚಾವೋ, ಮೆಹಂಗಾಯಿ (ಬೆಲೆ ಏರಿಕೆ) ಹಠಾವೋ’ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾನಿಗಿಂದಲೂ ಜನವಿರೋಧಿ ಆಡಳಿತ, ಭ್ರಷ್ಟಾಚಾರ, ಹಗರಣಗಳು ಹೆಚ್ಚಾಗಿವೆ. ಕೋಮುಗಲಭೆ ಸೃಷ್ಟಿಸಿ ಸಮಾಜದ ಶಾಂತಿ, ನೆಮ್ಮದಿ, ಸಾಮರಸ್ಯವನ್ನು ಹಾಳು ಮಾಡುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ’ ಎಂದು ದೂರಿದರು.

‘ಸಿಂಧನೂರು ತಾಲ್ಲೂಕಿನಿಂದ ಸಮಾವೇಶಕ್ಕೆ 5 ಸಾವಿರ ಜನ ತೆರಳಿಲಿದ್ದು, ವಾಹನ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.

ADVERTISEMENT

‘ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಆದರೆ ಆಕ್ಸಿಜನ್ ಪ್ಲಾಂಟ್, ಪೈಪ್‍ಲೈನ್ ಅಳವಡಿಸುವುದು ಬಾಕಿಯಿದೆ. ಇದಕ್ಕಾಗಿ ಕೆಕೆಆರ್‌ಡಿಬಿ ಯೋಜನೆಯಡಿ ₹1 ಕೋಟಿಗಿಂತ ಹೆಚ್ಚು ಅನುದಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಗಮನ ಸೆಳೆಯಲಾಗಿದೆ’ ಎಂದು ತಿಳಿಸಿದರು.

‘₹66 ಕೋಟಿಯಲ್ಲಿ ಮೊರಾಜಿ ದೇಸಾಯಿ ಶಾಲೆಗಳ ನಿರ್ಮಾಣ, ₹49 ಕೋಟಿಯಲ್ಲಿ ಸಾಲಗುಂದಾ ಏತನೀರಾವರಿ ಯೋಜನೆ, ₹39 ಕೋಟಿಯಲ್ಲಿ ಮುಳ್ಳೂರು ಬಳಿ ಸಿಂಧನೂರು ಹಳ್ಳಕ್ಕೆ ಬ್ಯಾರೇಜ್ ಕಂ. ಬ್ರಿಜ್, ವಳಬಳ್ಳಾರಿ ಹತ್ತಿರ ಬ್ಯಾರೇಜ್ ಕಂ. ವೇರ್, ಕಲ್ಯಾಣ ಪಥ, ಹಾರಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಮೊದಲ ಹಂತಕ್ಕೆ ₹20 ಕೋಟಿ ಹಾಗೂ ₹60 ಕೋಟಿಯಲ್ಲಿ ಕೌಶಲ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರಾಗಿದ್ದು, ಟೆಂಡರ್ ಕರೆದು ಕೆಲಸ ಆರಂಭಿಸಬೇಕಿದೆ’ ಎಂದು ಹೇಳಿದರು.

ಪಕ್ಷದ ಹಿರಿಯ ಮುಖಂಡ ಎಂ.ಕಾಳಿಂಗಪ್ಪ ವಕೀಲ, ನಗರಸಭೆ ಮಾಜಿ ಅಧ್ಯಕ್ಷ ಸೈಯ್ಯದ್ ಜಾಫರ್‌ಅಲಿ ಜಾಗೀರದಾರ್, ಮಾಜಿ ಸದಸ್ಯ ಪ್ರಭುರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.