ರಾಯಚೂರು: ತುಂಗಭದ್ರಾ ನದಿಯಲ್ಲಿ ಪುಷ್ಕರ ಸ್ನಾನ ಶುಕ್ರವಾರದಿಂದ ಆರಂಭವಾಗಿದ್ದು, ವಿವಿಧ ಧಾರ್ಮಿಕ ಕ್ರಿಯೆಗಳನ್ನು ನೆರವೇರಿಸುವುದಕ್ಕಾಗಿ ದೇಶದ ವಿವಿಧೆಡೆಯಿಂದ ನದಿಯತ್ತ ಬರಲಾರಂಭಿಸಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ಮತ್ತು ಮಾನ್ವಿ ತಾಲ್ಲೂಕುಗಳ ಮೂಲಕ ಹರಿಯುವ ತುಂಗಭದ್ರಾ ನದಿಯುದ್ದಕ್ಕೂ ಧಾರ್ಮಿಕ ಕೇಂದ್ರಗಳ ಬಳಿ ಜನರು ಪುಣ್ಯಸ್ನಾನ ಮಾಡಿಕೊಂಡು ಪುನೀತರಾಗುತ್ತಿದ್ದಾರೆ. ಮಾನ್ವಿಯ ವಿಜಯದಾಸರ ಕಟ್ಟೆಯ ಬಳಿ ನದಿಗೆ ವಿಶೇಷ ಪೂಜೆ ಸಲ್ಲಿಸಿ, ಸ್ನಾನಕ್ಕೆ ಅವಕಾಶ ನೀಡಲಾಯಿತು. ಸಿಂಧನೂರಿನ ದಡೇಸೂಗೂರು ಬಳಿ ಪುಷ್ಕರ ಸ್ನಾನ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಗೆ ಹೊಂದಿಕೊಂಡಿರುವ ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯ ಮಂತ್ರಾಲಯದತ್ತ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಜನರನ್ನು ನಿಯಂತ್ರಿಸುವುದಕ್ಕಾಗಿ ಪೊಲೀಸರು ನಿಯೋಜಿಸಲಾಗಿದೆ. ನದಿಯತ್ತ ತೆರಳುವ ಪ್ರತಿ ಭಕ್ತರನ್ನು ಮೆಟಲ್ ಡಿಟೆಕ್ಟರ್ ಮೂಲಕ ಬಿಡಲಾಗುತ್ತಿದೆ. ಮಂಚಾಲಮ್ಮ ದೇವಸ್ಥಾನ ಮುಂಭಾಗದಿಂದ ನದಿಯತ್ತ ತೆರಳುವ ಮಾರ್ಗವನ್ನು ಸ್ಥಗಿತಗೊಳಿಸಲಾಗಿದ್ದು, ಪರ್ಯಾಯ ಮಾರ್ಗಗಳಿಂದ ನದಿಗೆ
ತೆರಳಬಹುದು. ಸ್ನಾನ ಮಾಡಲು, ಧಾರ್ಮಿಕ ವಿಧಿವಿಧಾನ ನೆರವೇರಿಸಲು ಅವಕಾಶವಿದೆ.
ಶ್ರಾದ್ಧ, ಪಿಂಡಪ್ರದಾನ ಹಾಗೂ ತರ್ಪಣ ಕಾರ್ಯಕ್ಕೆ ನೆರವಾಗಲು ನದಿಯುದ್ದಕ್ಕೂ ಪುರೋಹಿತರು ಕುಳಿತಿದ್ದಾರೆ. ದೀಪದಾರತಿ, ಪೂಜೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ನದಿತೀರದಲ್ಲಿಯೇ ಮಾರಾಟ ಮಾಡುವ ವರಿದ್ದಾರೆ. ಕನ್ನಡ ಹಾಗೂ ತೆಲುಗು ಉಭಯ ಭಾಷೆಯಲ್ಲಿ ಮಾತನಾಡುವ ವ್ಯಾಪಾರಸ್ಥರು, ಪುರೋಹಿತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ಪುಷ್ಕರ ಸ್ನಾನದ ಮೊದಲದಿನ ವಿವಿಧೆಡೆಯಿಂದ ಜನರು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ಪುಣ್ಯಸ್ನಾನ ಮಾಡಿಕೊಂಡು ತರ್ಪಣ ಬಿಡುವುದು ಎಲ್ಲೆಡೆಯಲ್ಲೂ ಕಂಡುಬಂತು.
ಸ್ನಾನಘಟ್ಟ: ಭಕ್ತರು ಸುಗಮವಾಗಿ ಸ್ನಾನ ಮಾಡುವುದಕ್ಕೆ ಅನುವಾಗಲು ಮಂತ್ರಾಲಯದ ಮಠದಿಂದ ಸ್ನಾನಘಟ್ಟ ನಿರ್ಮಿಸಲಾಗಿದೆ. ಸ್ನಾನಘಟ್ಟದ ಮುಂದೆ ನದಿನೀರು ಹರಿದುಹೋಗುವ ವ್ಯವಸ್ಥೆಯೂ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.