ರಾಯಚೂರು: ಜಿಲ್ಲೆಯ ಕೆಲವು ಭಾಗಗಳಲ್ಲಿ ಸೋಮವಾರ ರಾತ್ರಿ ಪೂರ್ತಿಮಳೆ ಸುರಿದಿದ್ದು,ಜನಜೀವನ ಅಸ್ತವ್ಯಸ್ತವಾಗಿದೆ.
ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮದ ಕಸ್ತೂರಿ ಬಾ ಶಾಲೆಗೆ ಜಲ ದಿಗ್ಬಂಧನವಾಗಿದೆ. ಮಕ್ಕಳು ಶಾಲಾ ಆವರಣಕ್ಕೆ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ.
ಬಾಗಲವಾಡ ಹಳ್ಳವು ತುಂಬಿ ರಸ್ತೆ ಮೇಲೆ ಹರಿಯುತ್ತಿದ್ದು, ಹಿರೆಕೋಟ್ನೆಕಲ್ ಮತ್ತು ಹಣಗಿ ಮಾರ್ಗದ ಸಂಚಾರ ಸ್ಥಗಿತವಾಗಿದೆ.
ಲಿಂಗಸುಗೂರು ತಾಲ್ಲೂಕಿನ ಹಟ್ಟಿಯಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳೆಲ್ಲ ಕೆಸರು ಗದ್ದೆಗಳಾಗಿದ್ದು, ವಾಹನ ಮತ್ತು ಜನರು ಸಂಚರಿಸಲು ಪರದಾಡುತ್ತಿದ್ದಾರೆ.
ಕವಿತಾಳ ಸಮೀಪದ ಗುಡ್ಡದ ಮೇಲಿಂದ ದೊಡ್ಡ ಗಾತ್ರದ ಕಲ್ಲು ಉರುಳಿ ಬಿದ್ದಿದೆ. ಮನೆ ಕೊಠಡಿಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಮನೆಯವರು ಬೆಂಗಳೂರಿಗೆ ಗುಳೆ ಹೋಗಿದ್ದಾರೆ.
ಶಾಲೆಗೆ ನುಗ್ಗಿದ ನೀರು
ಸಿರವಾರ ತಾಲ್ಲೂಕಿನ ಕವಿತಾಳ ಸಮೀಪದ ದಿನ್ನಿಕ್ಯಾಂಪ್ ಸರ್ಕಾರಿ ಶಾಲೆಗೆ ನೀರು ನುಗ್ಗಿ ಸಮಸ್ಯೆಯಾಗಿದೆ. ತರಗತಿ ಕೊಠಡಿಗಳು, ಆವರಣ ಮತ್ತು ಬಿಸಿಯೂಟದ ಆಹಾರ ಧಾನ್ಯ ಸಂಗ್ರಹಿಸಿದ ಕೊಠಡಿ ಗೆ ಮಳೆ ನೀರು ನುಗ್ಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.