ADVERTISEMENT

ರಾಯಚೂರು: ಗುಡುಗು, ಸಿಡಿಲಿನ ಮಳೆಯ ಅಬ್ಬರ

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:40 IST
Last Updated 18 ಮೇ 2022, 4:40 IST
ಶಕ್ತಿನಗರ ಬಳಿಯ ಕೊರವಿಹಾಳ ಗ್ರಾಮದಲ್ಲಿ ಆಲಿಕಲ್ಲು ಮಳೆಗೆ ನೆಲಕಚ್ಚಿದ ಮಾವು
ಶಕ್ತಿನಗರ ಬಳಿಯ ಕೊರವಿಹಾಳ ಗ್ರಾಮದಲ್ಲಿ ಆಲಿಕಲ್ಲು ಮಳೆಗೆ ನೆಲಕಚ್ಚಿದ ಮಾವು   

ರಾಯಚೂರು: ಜಿಲ್ಲೆಯಾದ್ಯಂತ ಮಿರಗಾ ಮಳೆಯ ಅಬ್ಬರದ ಸಿಡಿಲು, ಗುಡುಗು ಶುರುವಾಗಿದ್ದು, ಎಲ್ಲೆಡೆಯಲ್ಲೂ ಮೋಡ ಮುಸುಕಿದ ವಾತಾವರಣ ಮುಂದುವರಿದಿದೆ. ಮಂಗಳವಾರ ಸಂಜೆ ರಾಯಚೂರು ನಗರದಲ್ಲಿ ಅರ್ಧಗಂಟೆ ಬಿರುಗಾಳಿ ಸಹಿತ ಮಳೆ ಸುರಿಯಿತು.

ಭಾರಿ ಪ್ರಮಾಣದಲ್ಲಿ ಬೀಸುತ್ತಿದ್ದ ಗಾಳಿಯಿಂದ ಭೀತಿಗೊಳಗಾದ ಜನರು ಸುರಕ್ಷಿತ ಜಾಗಗಳಿಗೆ ಓಡಿಹೋಗುತ್ರಿರುವುದು ಕಂಡುಬಂತು. ಆಗಸದಲ್ಲಿ ಗುಡುಗಿನ ಅಬ್ಬರ ಮತ್ತು ಸಿಡಿಲಿನ ಸದ್ದುಗಳು ನಿಜಕ್ಕೂ ಜನರನ್ನು ಬೆಚ್ಚಿ ಬೀಳಿಸಿದವು. ಬಿರುಗಾಳಿ ಜೊತೆಯಲ್ಲೇ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ರಸ್ತೆಗಳಲ್ಲಿ ನೀರು ಹರಿದಾಡಿತು.

ಮಳೆಗಾಲ ಆರಂಭಕ್ಕೆ ಮುನ್ಸೂಚನೆ ಎನ್ನುವ ರೀತಿಯಲ್ಲಿ ವಾತಾವರಣವು ಸೋಮವಾರ ಬೆಳಿಗ್ಗೆಯಿಂದಲೇ ತಂಪಾಗಿತ್ತು. ಬಿಸಿಲು ಬಾಧೆ ಇರಲಿಲ್ಲ. ನಿರೀಕ್ಷೆಯಂತೆ ಕೆಲಕಾಲ ಮಳೆ ಸುರಿದಿದ್ದರಿಂದ ಹಿತಕರ ವಾತಾವರಣ ಸೃಷ್ಟಿಯಾಗಿ ಮುದನೀಡಿತು.

ADVERTISEMENT

ಸಿಂಧನೂರು, ಸಿರವಾರ ಹಾಗೂ ದೇವದುರ್ಗ ತಾಲ್ಲೂಕುಗಳಲ್ಲಿ ಮೋಡ ಕವಿದ ವಾತಾವರಣವಿತ್ತು. ಆದರೆ ಮಳೆಯಾಗಲಿಲ್ಲ. ಲಿಂಗಸುಗೂರು, ಮಾನ್ವಿ, ಮಸ್ಕಿ ಹಾಗೂ ರಾಯಚೂರು ತಾಲ್ಲೂಕುಗಳಲ್ಲಿ ಅಲ್ಲಲ್ಲಿ ಮಳೆ ಸುರಿದಿದೆ.

ರಾಯಚೂರು ನಗರದ ಬಡಾವಣೆ ರಸ್ತೆಗಳು ಮತ್ತು ಮಾರುಕಟ್ಟೆ ಮಾರ್ಗಗಳಲ್ಲಿ ನೀರು ಸಂಗ್ರಹವಾಗಿದ್ದರಿಂದ ಸಂಚಾರ ಸಂಕಷ್ಟಮಯವಾಗಿತ್ತು. ಮಳೆ ಕಾರಣದಿಂದ ವಾಹನಗಳು ನಿಧಾನವಾಗಿ ಸಂಚರಿಸಿದವು. ಬಿರುಗಾಳಿ ಆರಂಭವಾಗಿದ್ದರಿಂದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.