ADVERTISEMENT

ಮುದಗಲ್ | ಮಳೆ ಕೊರತೆ: ಬಾಡುತ್ತಿರುವ ಬೆಳೆ

ಹೋಬಳಿಯಲ್ಲಿ ಶೇ 97 ಮಳೆ ಕೊರತೆ

ಡಾ.ಶರಣಪ್ಪ ಆನೆಹೊಸೂರು
Published 4 ಆಗಸ್ಟ್ 2024, 5:36 IST
Last Updated 4 ಆಗಸ್ಟ್ 2024, 5:36 IST
ಮುದಗಲ್ ಸಮೀಪದ ನಾಗರಾಳ ಗ್ರಾಮದಲ್ಲಿ ನೀರಿಲ್ಲದೆ ಬಾಡುತ್ತಿರುವ ತೊಗರೆ ಬೆಳೆ
ಮುದಗಲ್ ಸಮೀಪದ ನಾಗರಾಳ ಗ್ರಾಮದಲ್ಲಿ ನೀರಿಲ್ಲದೆ ಬಾಡುತ್ತಿರುವ ತೊಗರೆ ಬೆಳೆ   

ಮುದಗಲ್: ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಕಷ್ಟ ಅನುಭವಿಸಿದ್ದ ರೈತರಿಗೆ, ಹಿಂಗಾರು ಅವಧಿಯಲ್ಲೂ ಸಂಕಷ್ಟ ಮುಂದುವರಿದಿದೆ. ಬಿತ್ತನೆ ಪ್ರಮಾಣ ಶೇ 70 ದಾಟಿಲ್ಲ.

ಕೃಷಿ ಇಲಾಖೆ ಹೋಬಳಿಯಲ್ಲಿ ಹಿಂಗಾರು ಹಂಗಾಮಿಗೆ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಂಡಿದೆ. ಈವರೆಗೆ 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ವಾಡಿಕೆಯಂತೆ ಇಲ್ಲಿಯವರಿಗೆ 79.2 ಮಿ.ಮೀ ಮಳೆಯಾಗಬೇಕು. ಆದರೆ ಕೇವಲ 2 ಮಿ.ಮೀ ಮಳೆಯಾಗಿದೆ.

ಬಿತ್ತಿದ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ. ಮಳೆ ಇಲ್ಲದೆ ಬೆಳೆಗಳು ಸರಿಯಾಗಿ ಬಂದಿಲ್ಲ. ಉಷ್ಣಾಂಶವೂ ಏರಿಕೆಯಾಗಿದ್ದು ಮಳೆಯ ಲಕ್ಷಣ ಕಾಣುತ್ತಿಲ್ಲ. ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ರಾಂಪುರ ಏತ ನೀರಾವರಿ ಕಾಲುವೆಗೆ ಡಿಸೆಂಬರ್ ತಿಂಗಳಲ್ಲಿಯೇ ನೀರು ಬಂದು ಆಗುತ್ತಿವೆ ಎಂಬ ಸುದ್ದಿ ಕೇಳಿದ ಮೆಣಿಸಿನ ಬೆಳೆದ ರೈತರು ನಷ್ಟದ ಆತಂಕದಲ್ಲಿದ್ದಾರೆ .

ADVERTISEMENT

ಹಿಂಗಾರು ಸಮಯದಲ್ಲಿ ಜೋಳ, ಕಡಲೆ, ಶೇಂಗಾ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡುತ್ತಾರೆ. ಉಳಿದಂತೆ ಸಜ್ಜೆ, ಮುಸುಕಿನ ಜೋಳ ಇತರೆ ಬೇರೆ ಎಣ್ಣೆ ಕಾಳುಗಳನ್ನು ಸ್ವಲ್ಪ ಪ್ರಮಾಣದಲ್ಲಿ ಬೆಳೆಯುತ್ತಾರೆ. ಹಿಂಗಾರು ಆರಂಭದಲ್ಲಿಯೇ ಸ್ವಲ್ಪ ಮಳೆಯಾಗಿದ್ದರಿಂದ ರೈತರು ಸಂತಸಪಟ್ಟಿದ್ದರು. ಹದಗೊಳಿಸಿ ಬಿತ್ತನೆ ಮಾಡಿದ್ದರು. ಈಗಲೂ ಕೆಲ ರೈತರು ಬಿತ್ತನೆಗೆ ಕಾಯುತ್ತಿದ್ದಾರೆ.

ಮುದಗಲ್ ಹೋಬಳಿಯ ನಾಗಲಾಪುರ, ನಾಗರಾಳ, ಲಕ್ಕಿಹಾಳ, ಉಪ್ಪಾರ ನಂದಿಹಾಳ, ಯರದಿಹಾಳ, ಬನ್ನಿಗೋಳ, ಕನಸಾವಿ ಹೂನೂರ, ಮಾಕಾಪುರು, ರಾಮತನಾಳ ಸೇರಿದಂತೆ 50 ಕ್ಕೂ ಹೆಚ್ಚು ಗ್ರಾಮದ ರೈತರು ಮಳೆಯನ್ನೇ ನಂಬಿ ಬೆಳೆ ಬೆಳೆಯುತ್ತಾರೆ.

ಮಳೆ ಇಲ್ಲದೆ ಒಣಗುತ್ತಿರುವ ಬೆಳೆಯ ನಷ್ಟವನ್ನು ಸರ್ಕಾರ ತುಂಬಿಕೊಡಬೇಕು. ಜತೆಗೆ ಬೆಳೆ ಸಾಲ ಮನ್ನಾ ಮಾಡಬೇಕು.
ಲಕ್ಷ್ಮಣ, ರೈತ
ಹಿಂಗಾರು ಹಂಗಾಮಿನಲ್ಲಿ 14 ಸಾವಿರ ಹೆಕ್ಟರ್‌ನಲ್ಲಿ ಬೆಳೆಯುವಷ್ಟು ಕಡಲೆ ಜೋಳ ಶೇಂಗಾ ಬೀಜಗಳನ್ನು ರೈತರು ಪಡೆದಿದ್ದಾರೆ.
ಮಹಾಂತಯ್ಯ ಹಿರೇಮಠ, ಮುದಗಲ್ ರೈತ ಸಂಪರ್ಕ ಕೇಂದ್ರದ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.