ಮಸ್ಕಿ: ‘ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಸಂವಿಧಾನದ ಆಶಯಗಳನ್ನು ಜಾರಿಗೆ ತಂದಿದೆ’ ಎಂದು ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರುವಿಹಾಳ ಹೇಳಿದರು.
76ನೇ ಗಣರಾಜ್ಯೋತ್ಸವದ ನಿಮಿತ್ತ ಭಾನುವಾರ ಪಟ್ಟಣದ ಕೇಂದ್ರ ಶಾಲಾ ಮೈದಾನದಲ್ಲಿ ತಾಲ್ಲೂಕು ಆಡಳಿತ ಹಾಗೂ ಪುರಸಭೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕ್ಷೇತ್ರದ 5 (ಎ) ಕಾಲುವೆ ಅನುಷ್ಠಾನಕ್ಕೆ ಸರ್ಕಾರ ಸಾವಿರ ಕೋಟಿ ಹಣ ನೀಡಿದೆ. ಮಿನಿ ವಿಧಾನಸೌಧ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಿದೆ. ಪ್ರತಿಪಕ್ಷದವರು ಸರ್ಕಾರದಲ್ಲಿ ಹಣ ಇಲ್ಲಾ ಎಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ’ ಎಂದರು.
ತಹಶೀಲ್ದಾರ್ ಮಲ್ಲಪ್ಪ ಯರಗೋಳ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ತಾಲ್ಲೂಕು ಪಂಚಾಯಿತಿ ಇಓ ಅಮರೇಶ ಯಾದವ, ಮುಖ್ಯಾಧಿಕಾರಿ ನರಸರೆಡ್ಡಿ, ಸಿಪಿಐ ಬಾಲಚಂದ್ರ ಲಕ್ಕಂ, ನೀರಾವರಿ ಇಲಾಖೆಯ ಗುರುಮೂರ್ತಿ, ದಾವುದ, ಡಾ. ಅಮರೇಗೌಡ, ಆದಪ್ಪ ಸೇರಿದಂತೆ ತಾಲ್ಲೂಕಿನ ಅಧಿಕಾರಿಗಳು ಇದ್ದರು. ಕವಿ ಪ್ರಶಾಂತ ದಾನಪ್ಪ, ಮಲ್ಲಯ್ಯ ಬಳ್ಳಾ, ಹರ್ಷದ ಎಂ. ಬಳ್ಳಾ ತಂಡದಿಂದ ಗಣರಾಜ್ಯೋತ್ಸವ ಕುರಿತು ಕ್ರಾಂತಿ ಗೀತೆ ಹಾಡಲಾಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪುರಸಭೆಯ ಧ್ವಜಸ್ತಂಭ ಉದ್ಘಾಟನೆ: ಮಸ್ಕಿ ಪುರಸಭೆಯಲ್ಲಿ ನೂತನವಾಗಿ ನಿರ್ಮಿಸಿದ 22 ಅಡಿ ಉದ್ದದ ಧ್ವಜ ಸ್ತಂಭವನ್ನು ಶಾಸಕ ಆರ್. ಬಸನಗೌಡ ತುರುವಿಹಾಳ ಭಾನುವಾರ ಉದ್ಘಾಟಿಸಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಉಪಾಧ್ಯಕ್ಷೆ ಗೀತಾ ಶಿವರಾಜ, ಮುಖ್ಯಾಧಿಕಾರಿ ನರಸರೆಡ್ಡಿ ಸೇರಿ ಮುಖಂಡರು, ಪುರಸಭೆ ಸದಸ್ಯರು ಇದ್ದರು.
ದೈವದಕಟ್ಟೆ ಮೇಲೆ ಮುಖಂಡ ಕೆ. ವೀರನಗೌಡ ಧ್ವಜಾರೋಹಣ ಮಾಡಿದರು. ಶಾಸಕರ ಕಚೇರಿ, ಬಿಜೆಪಿ, ಕಾಂಗ್ರೆಸ್ ಕಚೇರಿ, ಪುರಸಭೆ, ತಾಲ್ಲೂಕು ಪಂಚಾಯಿತಿ ಸೇರಿದಂತೆ ವಿವಿಧೆಡೆ ಧ್ವಜಾರೋಹಣ ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.