ಪ್ರಜಾವಾಣಿ ವಾರ್ತೆ
ಲಿಂಗಸುಗೂರು: ‘ಹಿಂದೂ ಧರ್ಮದಲ್ಲಿ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವ ಅನೇಕ ಹಬ್ಬ ಹರಿದಿನಗಳಲ್ಲಿ ವೈಜ್ಞಾನಿಕ ಸತ್ಯ ಅಡಗಿದೆ. ಅಂತೆಯೆ ಯುಗಾದಿ ನಮೆಗಲ್ಲ ಹೊಸ ವರ್ಷದ ಮೊದಲ ದಿನ ಹಾಗೂ ಹಬ್ಬವು ಆಗಿದೆ’ ಎಂದು ಗುರುಗುಂಟಾ ಅಮರೇಶ್ವರ ದೇವರ ಗುರು ಅಭಿನವ ಗಜದಂಡ ಶಿವಾಚಾರ್ಯರು ಹೇಳಿದರು.
ಶನಿವಾರ ನಡೆದ ರಾಜ್ಯ ಧಾರ್ಮಿಕ ದಿನಾಚರಣೆಯಲ್ಲಿ ಪ್ರಜಾವಾಣಿ ಪತ್ರಿಕೆಯ ‘ಯುಗಾದಿ ತರಲಿ ನವಚೇತನ’ ಹೆಸರಿನ ವಿಶೇಷ ಪುರವಣಿಯನ್ನು ಬಿಡುಗಡೆ ಮಾಡಿ ಆಶೀರ್ವಚ ನೀಡಿದ ಅವರು, ‘ಪ್ರಜಾವಾಣಿ ಪತ್ರಿಕೆಯು ಯಾವುದೇ ಧರ್ಮಗಳ ಆಚರಣೆಯ ಹಿಂದಿರುವ ವೈಜ್ಞಾನಿಕ ಪ್ರಜ್ಞೆಯನ್ನು ಜನತೆಗೆ ತಲುಪಿಸಲು ಮೇಲಿಂದ ಮೇಲೆ ಇಂತಹ ಪುರವಣಿಗಳ ಮೂಲಕ ವಿಶೇಷ ವರದಿಗಳನ್ನು ಪ್ರಕಟಿಸುತ್ತಾ ಬಂದಿದೆ. ಅಮರೇಶ್ವರ ದೇವಸ್ಥಾನ ಮತ್ತು ಸುತ್ತಮುತ್ತಲ ಪರಿಸರದಲ್ಲಿ ವಿಸ್ಮಯಕಾರಿ ಘಟನಾವಳಿಗಳನ್ನೂ ಪುರವಣಿಯಲ್ಲಿ ಪ್ರಕಟಿಸಿತ್ತು’ ಎಂದು ಸ್ಮರಿಸಿದರು.
ಗುರುಗುಂಟಾ ಸಂಸ್ಥಾನಿಕ ರಾಜಾ ಶ್ರೀನಿವಾಸ ನಾಯಕ, ತಹಶೀಲ್ದಾರ್ ಬಲರಾಮ್ ಕಟ್ಟಿಮನಿ ಮಾತನಾಡಿ, ‘ಯುಗಾದಿ ಹಬ್ಬದ ಆಚರಣೆ ಹಾಗೂ ಅಡುಗೆ ಸಿದ್ಧತೆಯಲ್ಲಿ ಬಳಸುವ ವಸ್ತುಗಳ ಮಾಹಿತಿ ಸ್ಪಷ್ಟವಾಗಿ ವಿವರಿಸಲಾಗಿದೆ. ಮೌಢ್ಯ ಆಚರಣೆಯ ಕುರಿತು ಪರೋಕ್ಷವಾಗಿ ಆಗಾಗ ವಿಶೇಷ ಲೇಖನಗಳಲ್ಲಿ ಎಚ್ಚರಿಕೆ ನೀಡುತ್ತ ಬಂದಿದೆ. ಯುಗಾದಿ ಪುರವಣಿ ಗ್ರಾಮೀಣ ಜನತೆಯಲ್ಲಿ ವೈಜ್ಞಾನಿಕ ಪ್ರಜ್ಞೆ ಮೂಡಿಸಲು ಸಹಕಾರಿ ಆಗಿದೆ’ ಎಂದು ಬಣ್ಣಿಸಿದರು.
ದೇವಸ್ಥಾನ ಸಮಿತಿ ಆಡಳಿತಾಧಿಕಾರಿ ರಂಗನಾಥ ನಾಯಕ, ಪ್ರಧಾನ ಅರ್ಚಕರಾದ ಅಮರೇಶ ತಿಳಿ, ಗಂಗಾಧರ ಶಾಸ್ತ್ರಿ ಬ್ಯಾಳಿ, ಗುರುಮೂರ್ತೆಯ್ಯ ಮೆತ್ತನವರ್ ಸೇರಿದಂತೆ ಮುಖಂಡರು ಹಾಗೂ ಭಕ್ತರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.