ADVERTISEMENT

ಬಿತ್ತನೆ ಬೀಜ ವಿತರಣೆ ಸ್ಥಗಿತ: ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 14:56 IST
Last Updated 6 ಅಕ್ಟೋಬರ್ 2023, 14:56 IST
ಕವಿತಾಳ ಸಮೀಪದ ಹಾಲಾಪುರ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡದೆ ಬೀಗ ಹಾಕಿರುವುದು
ಕವಿತಾಳ ಸಮೀಪದ ಹಾಲಾಪುರ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡದೆ ಬೀಗ ಹಾಕಿರುವುದು   

ಕವಿತಾಳ: ಮಸ್ಕಿ ತಾಲ್ಲೂಕಿನ ಹಾಲಾಪುರ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು ಬಿತ್ತನೆ ಬೀಜ ವಿತರಣೆ ಮಾಡುತ್ತಿಲ್ಲ ಎಂದು ರೈತರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

ಕಡಲೆ ಹಾಗೂ ಜೋಳ ಬಿತ್ತನೆ ಬೀಜ ವಿತರಣೆಗೆ ಗುರುವಾರ ಚಾಲನೆ ನೀಡಿದ್ದ ಪ್ರಭಾರ ಸಹಾಯಕ ಕೃಷಿ ಅಧಿಕಾರಿ ಅಮರೇಶ ಅವರು ಶುಕ್ರವಾರ ಕಚೇರಿಗೆ ಬಾರದ ಕಾರಣ ಸಿಬ್ಬಂದಿ ಕೇಂದ್ರಕ್ಕೆ ಬೀಗ ಹಾಕಿಕೊಂಡು ಹೋಗಿದ್ದರು ಎನ್ನಲಾಗಿದೆ. ಹೀಗಾಗಿ ರೈತರು ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

‘ಕಾಯಂ ಅಧಿಕಾರಿ ಹಾಗೂ ಸಿಬ್ಬಂದಿ ಇಲ್ಲದ್ದರಿಂದ ಸೌಲಭ್ಯಗಳು ಸಿಗುತ್ತಿಲ್ಲ, ಪ್ರಭಾರ ಅಧಿಕಾರಿ ಮತ್ತು ಸಿಬ್ಬಂದಿ ನಡುವಿನ ಹೊಂದಾಣಿಕೆ ಕೊರತೆಯಿಂದ ರೈತರು ತೊಂದರೆ ಅನುಭವಿಸುವಂತಾಗಿದೆ’ ಎಂದು ಸಿದ್ದಾರ್ಥ ಪಾಟೀಲ ಆರೋಪಿಸಿದರು.

ADVERTISEMENT

‘ನಿನ್ನೆಯಷ್ಟೆ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿದ್ದ ಅಧಿಕಾರಿ ತಾವು ಇಂದು ಕಚೇರಿಗೆ ಬಾರದ ಕಾರಣ ಸಿಬ್ಬಂದಿಗೆ ಬೀಜ ವಿತರಣೆ ಮಾಡದಂತೆ ಸೂಚಿಸಿದ್ದಾರೆ ಕಾಯಂ ಅಧಿಕಾರಿಯನ್ನು ನೇಮಕ ಮಾಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಶಾಸಕರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ರಾಘವೇಂದ್ರ ಯದ್ದಲದಿನ್ನಿ ದೂರಿದರು.

ಹನುಮಂತ ತೋರಣದಿನ್ನಿ, ಜಗದೀಶ ಹಾಲಾಪುರ, ಬಸಪ್ಪ ತೋರಣದಿನ್ನಿ, ಹನುಮಂತ ಭೋವಿ, ಅಮರೇಶ ರಾಮಲದಿನ್ನಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.