ADVERTISEMENT

ಅಕ್ರಮ ಮರಳು ಸಾಗಣೆ; ತನಿಖಾ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 14:43 IST
Last Updated 12 ಸೆಪ್ಟೆಂಬರ್ 2020, 14:43 IST
ಸಿದ್ಧಲಿಂಗ ಸ್ವಾಮಿ
ಸಿದ್ಧಲಿಂಗ ಸ್ವಾಮಿ   

ರಾಯಚೂರು: ದೇವದುರ್ಗ ತಾಲ್ಲೂಕಿನ ಬ್ಲಾಕ್ ನಂಬರ್ 1 ಹಾಗೂ 2 ರಲ್ಲಿ ಟೆಂಡರ್ ನಿಯಮ ಉಲ್ಲಂಘಿಸಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಶ್ರೀರಾಮಸೇನೆಯಿಂದ ಮದ್ರಾಸಿನ ರಾಷ್ಟ್ರೀಯಹಸಿರು ನ್ಯಾಯಪೀಠಕ್ಕೆ ದೂರು ನೀಡಿಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖಾ ಸಮಿತಿಯೊಂದನ್ನು ರಚಿಸಿರುವ ಪೀಠವು ನವೆಂಬರ್‌ 11 ರೊಳಗಾಗಿ ವರದಿ ನೀಡಲು ಆದೇಶಿಸಿದೆ ಎಂದು ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿದ್ದಲಿಂಗ ಸ್ವಾಮಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವದುರ್ಗದಲ್ಲಿ ಮರಳುಗಾರಿಕೆ ಮಾಡುವ ಸಲುವಾಗಿ 2017 ರಲ್ಲಿ ರಾಜ್ಯ ಸರ್ಕಾರ 18 ಯಾರ್ಡ್‌ಗಳನ್ನು ಟೆಂಡರ್ ನೀಡಿತ್ತು. ಈ ಪೈಕಿ ಗುತ್ತಿಗೆ ಪಡೆದ ಬ್ಲಾಕ್ ನಂಬರ್ 1 ಅನಂದ ದೊಡ್ಡಮನಿ ಹಾಗೂ ಬ್ಲಾಕ್ ನಂಬರ್ 2 ನಂಬರ್ 2 ಪಿಎಲ್ ಕಾಂಬ್ಳೆ ಅವರು ಅವರು ವಾಹನಗಳಲ್ಲಿ 12 ಟನ್ ಮರಳು ಸಾಗಣೆ ರಾಯಲ್ಟಿ ಪಡೆದು 40 ಟನ್ ಮರಳು ಸಾಗಣೆ ಮಾಡುತ್ತಿದ್ದಾರೆ ಎಂದು ದೂರಿದರು.

ಸರ್ಕಾರದ ಖಜಾನೆಗೆ ಕೊಳ್ಳೆ ಹೊಡೆಯುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತ ಹಾಗೂ ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದರೂ ಕೂಡ ಕ್ರಮ ಕೈಗೊಂಡಿರಲಿಲ್ಲ. ಆನಂತರ ಮದ್ರಾಸಿನ ರಾಷ್ಟ್ರೀಯ ಹಸರು ನ್ಯಾಯ ಪೀಠಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯನ್ನು ಕಳೆದ 8 ರಂದು ಪುರಸ್ಕರಿಸಿ ಈ ಪೀಠವೂ ದಾಖಲೆ ಪರಿಶೀಲಿಸಿ ಸತ್ಯಾಂಶ ಹೊರಬರಲು ಜಿಲ್ಲಾಧಿಕಾರಿ, ಭೂ ವಿಜ್ಞಾನ ಇಲಾಖೆ ಅಧಿಕಾರಿ ಹಾಗೂ ರಾಜ್ಯದ ಹಿರಿಯ ಅಧಿಕಾರಿಗಳು ಸೇರಿ ಐದು ಜನರ ತನಿಖಾ ತಂಡ ರಚಿಸಿದೆ ಎಂದರು.

ADVERTISEMENT

ಅಕ್ರಮ ಮರಳುಗಾರಿಕೆಯಿಂದಾಗಿ ಸರ್ಕಾರದ ಹಣ ಕೊಳ್ಳೆ ಹೊಡೆದು ಪರಿಸರ ನಾಶಕ್ಕೂ ಕಾರಣವಾದ ಬಗ್ಗೆ ಹೋರಾಟ ಮಾಡಿದ್ದರಿಂದ ಕಳೆದ ಒಂದು ವಾರದಿಂದ ಜಿಲ್ಲಾಡಳಿತ ಆ ಭಾಗದ 18 ಪಾಯಿಂಟ್ ಈಗ ಮರಳು ಸಾಗಣೆ ತಾತ್ಕಾಲಿಕ ಸ್ಥಗಿತಗೊಳಿಸಿದ್ದಾರೆ. ಅಕ್ರಮದ ಬಗ್ಗೆ ಪ್ರಶ್ನೆ ಮಾಡಿದ ಹೋರಾಟಗಾರರ ಮೇಲೆ ಗುತ್ತಿಗೆದಾರರು, ಪೊಲೀಸರು ಅಧಿಕಾರಿಗಳು ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ. ಪೊಲೀಸರು ದೂರುದಾರರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಹೋರಾಟಗಾರ ಶರಣಪ್ಪ ರೆಡ್ಡಿ ಮಾತನಾಡಿ, ‘ಅಕ್ರಮ ಮರಳು ನಡೆಸಿದ ಬಗ್ಗೆ ಸಾಕ್ಷಿ ಸಮೇತ ಜೂನ್ 26ಕ್ಕೆ ದೇವದುರ್ಗ ಠಾಣೆಯಲ್ಲಿ ದೂರು ನೀಡಲೂ ಹೋದಾಗ ಪ್ರಕರಣ ದಾಖಲಿಸಿಲ್ಲ, ಹಿಂಬರವೂ ನೀಡಿಲ್ಲ. ಬದಲಾಗಿ ನನ್ನ ವಿರುದ್ಧವೇ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ ನನಗೆ ಸಹಕಾರ ನೀಡಿದವರನ್ನು ಗುರಿಯಾಗಿಸಿ ದೌರ್ಜನ್ಯ ನಡೆಸಿದ್ದಾರೆ’ ಎಂದರು.

ಅಕ್ರಮಕ್ಕೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್‌ ಅವರು ಸಹಕಾರ ನೀಡುತ್ತಿದ್ದಾರೆ ಎಂದು ದೂರಿದರು.

ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ‌ಭಾವಿ, ವಿಜಯ ಪಾಟೀಲ ,ಮಲ್ಲನಗೌಡ ಮಾಲಿ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.