
ಸಿಂಧನೂರು: ಕಳಪೆ ಬೀಜದಿಂದ ಭತ್ತದ ಬೆಳೆಗೆ ವೈರಸ್ ಹರಡಿದ್ದು ಕಂಪನಿ ಮಾಲೀಕರು ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘದಿಂದ ಗಾಂಧಿನಗರದ ವಿನಾಯಕ ಟ್ರೇಡರ್ಸ್ ಗೊಬ್ಬರದ ಅಂಗಡಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ನೀಲಕಂಠೇಶ್ವರ ಕಂಪನಿಯ ಭತ್ತದ ಬೀಜವನ್ನು ತಾಲ್ಲೂಕಿನ ಅತಿ ಹೆಚ್ಚು ರೈತರು ಖರೀದಿ ಮಾಡಿ ಭತ್ತದ ಬೆಳೆ ಬೆಳೆಸಿದ್ದಾರೆ. ಪ್ರಸ್ತುತ ಕಂಪನಿಯ ಬೀಜಕ್ಕೆ ರೋಗ ನಿಯಂತ್ರಣ ಸಾಮರ್ಥ್ಯ ಇಲ್ಲದಿರುವುದರಿಂದ ವೈರಸ್ ಹರಡಿಕೊಂಡಿದೆ ಎಂದು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳೇ ತಿಳಿಸಿದ್ದಾರೆ.
ಆದ್ದರಿಂದ ನೀಲಕಂಠೇಶ್ವರ ಕಂಪನಿ ಮಾಲೀಕರು ಬೀಜ ಖರೀದಿಸಿದ ರೈತರಿಗೆ ಪರಿಹಾರ ಕೊಡಬೇಕು’ ಎಂದು ರೈತ ಸಂಘದ ಮುಖಂಡರು ಒತ್ತಾಯಿಸಿದರು.
ಪೊಲೀಸ್ ಮತ್ತು ಕೃಷಿ ಅಧಿಕಾರಿಗಳು ಕಂಪನಿಯ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಒಂದು ವಾರ ಸಮಯ ಕೇಳಿದ್ದಾರೆ. ಅಷ್ಟರೊಳಗಾಗಿ ಪರಿಹಾರ ಕೊಡುವ ತೀರ್ಮಾನ ಕೈಗೊಳ್ಳದಿದ್ದರೆ ಉಗ್ರ ಸ್ವರೂಪದ ಹೋರಾಟಕ್ಕಿಳಿಯುವುದಾಗಿ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜಪ್ಪ ಸಾಸಲಮರಿ ತಿಳಿಸಿದರು.
ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿಗಳಾದ ನಾಗರಾಜ ಬಿಂಗಿ, ಬೀರಪ್ಪ ಹಾಲಾಪೂರ, ಕೊಪ್ಪಳ ಜಿಲ್ಲೆಯ ಕನಕಗಿರಿ, 3ನೇ ಮೈಲ್ಕ್ಯಾಂಪ್ ಸೇರಿದಂತೆ ಹಲವು ಗ್ರಾಮದ ರೈತ ಮುಖಂಡರು ಭಾಗವಹಿಸಿದ್ದರು.
ಮುಖಂಡರಾದ ಈಶಪ್ಪಗೌಡ ಬೇರ್ಗಿ, ರಮೇಶಪ್ಪಗೌಡ ದೇಸಾಯಿ, ಅಮರೇಶ ಗೊರೇಬಾಳ, ನರಸಪ್ಪ ಗೊರೇಬಾಳ, ಅಂಬಣ್ಣ ಯರದಿಹಾಳ, ಶ್ರೀಕಾಂತ ಹಸ್ಮಕಲ್, ಶಿವು ಮುದಗಲ್ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.