ADVERTISEMENT

ಶ್ರಮ, ಹಣ ಉಳಿಸುವ ಸೌರಶಕ್ತಿ ಶಾಖಾ ಪಟ್ಟಿಗೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 19:45 IST
Last Updated 14 ಡಿಸೆಂಬರ್ 2019, 19:45 IST
ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಪಗಡದಿನ್ನಿಯ ರೈತ ಶ್ರೀನಿವಾಸ ಅವರ ಜಮೀನಿನಲ್ಲಿ ಅಳವಡಿಸಿದ ಸೌರಶಕ್ತಿ ಶಾಖ ಪೆಟ್ಟಿಗೆ
ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಪಗಡದಿನ್ನಿಯ ರೈತ ಶ್ರೀನಿವಾಸ ಅವರ ಜಮೀನಿನಲ್ಲಿ ಅಳವಡಿಸಿದ ಸೌರಶಕ್ತಿ ಶಾಖ ಪೆಟ್ಟಿಗೆ   

ರಾಯಚೂರು: ರೈತರು ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ತೆಗೆದುಕೊಂಡು ಹೋಗುವ ಪೂರ್ವದಲ್ಲಿ ಅವುಗಳನ್ನು ಒಣಗಿಸಲು ಹಾಗೂ ಕೂಲಿಗಾಗಿ ಮಾಡುವ ವೆಚ್ಚವನ್ನು ಅರ್ಧದಷ್ಟು ಕಡಿಮೆಗೊಳಿಸುವ ‘ಸೌರಶಕ್ತಿ ಶಾಖಾ ಪೆಟ್ಟಿಗೆ’ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನ ವಿಭಾಗವು ಅಭಿವೃದ್ಧಿ ಮಾಡಿದೆ.

ಬಹುತೇಕ ರೈತರು ಫಸಲನ್ನು ರಸ್ತೆಗಳಲ್ಲಿ ಅಥವಾ ಮಾರುಕಟ್ಟೆಯ ಪ್ರಾಂಗಣಗಳಲ್ಲಿ ಹರಡುತ್ತಾರೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಣಗಿಸುವುದಕ್ಕೆ ಸೂರ್ಯನ ಪ್ರಖರ ಬಿಸಿಲಿನ ಅಗತ್ಯ ಇರುತ್ತದೆ. ಇದು ಸಮಪ್ರಮಾಣದಲ್ಲಿ ಸಿಗದೆ ಇರುವುದಕ್ಕೆ ಪದೇ ಪದೇ ಉತ್ಪನ್ನಗಳನ್ನು ಹೊರಳಿಸುವ ಕೆಲಸ ಮಾಡಿಸಬೇಕಾಗುತ್ತದೆ. ಟರ್ಪಾಲುಗಳಿಂದ ಮುಚ್ಚಿ ಹಾಕುವುದರಿಂದ ಫಸಲು ಗುಣಮಟ್ಟ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ರೈತರ ಈ ಸಮಸ್ಯೆಗೆ ಪರಿಹಾರವಾಗಿ ಸೌರಶಕ್ತಿ ಶಾಖಾ ಪೆಟ್ಟಿಗೆ ಬಳಕೆ ಬಂದಿದೆ. ಈಗಾಗಲೇ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವ ರೈತರು ಅಳವಡಿಸಿಕೊಂಡಿದ್ದಾರೆ. ಕೃಷಿ ಉತ್ಪನ್ನಗಳ ಬಣ್ಣ ಹಾಳಾಗದಂತೆ, ಕೀಟ, ಪಕ್ಷಿ ಹಾಗೂ ವಾತಾವರಣದ ವೈಪರೀತ್ಯದಿಂದ ರಕ್ಷಿಸುವ ಕಾರ್ಯವನ್ನು ಇದು ಮಾಡುತ್ತದೆ. ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ಮಾಡುತ್ತದೆ.

ADVERTISEMENT

ರೈತರು ತಾವು ಬೆಳೆಯುವ ಸಾಮರ್ಥ್ಯಕ್ಕೆ ಅನುಗುಣವಾದ ಮಾದರಿಯ ಸೌರಶಕ್ತಿ ಪೆಟ್ಟಿಗೆಗಳನ್ನು ಅಳವಡಿಸಿಕೊಳ್ಳಬಹುದು. ರೈತರ ಅನುಕೂಲಕ್ಕಾಗಿ 100 ಕಿಲೋ, 1000 ಕಿಲೋ ಹಾಗೂ 2000 ಕಿಲೋ ಮಾದರಿಯ ಪೆಟ್ಟಿಗೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಈ ತಂತ್ರಜ್ಞಾನ ಅಳಡಿಸಿಕೊಳ್ಳುವ ರೈತರಿಗೆ ಸರ್ಕಾರವು ತೋಟಗಾರಿಕೆ ಇಲಾಖೆ ಮೂಲಕ ಸಹಾಯಧನ ನೀಡುತ್ತದೆ. ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ಶೇ 90 ರಷ್ಟು ಹಾಗೂ ಸಾಮಾನ್ಯ ರೈತರಿಗೆ ಶೇ 40 ರಷ್ಟು ಸಹಾಯಧನ ದೊರೆಯುತ್ತದೆ.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನ ವಿಭಾಗವು ರಾಯಚೂರಿನ ಎಸ್‌ಆರ್‌ಬಿ ಇಂಡಸ್ಟ್ರೀಸ್‌ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ರೈತರ ತೋಟಗಳಲ್ಲಿ ಸೌರಶಕ್ತಿ ಪೆಟ್ಟಿಗೆ ಅಳವಡಿಸುವ ಕಾರ್ಯವನ್ನು ಎಸ್‌ಆರ್‌ಬಿ ಕಂಪೆನಿಯರು ಮಾಡುತ್ತಿದ್ದಾರೆ. ಕೃಷಿಮೇಳದಲ್ಲಿ ಈ ಬಗ್ಗೆ ಮಾಹಿತಿ ಲಭ್ಯವಿದೆ. ಆಸಕ್ತಿ ಹೊಂದಿರುವ ರೈತರು 94488 15812 (ರವೀಂದ್ರ) ಸಂಖ್ಯೆಗೆ ಕರೆ ಮಾಡಬಹುದು.

ಸೌರಶಕ್ತಿ ಶಾಖ ಪೆಟ್ಟಿಗೆಯಲ್ಲಿ ಮೆಣಸಿನಕಾಯಿ, ಅಂಜೂರ, ದ್ರಾಕ್ಷಿ, ಗೋಡಂಬಿ, ಅಡಿಕೆ, ಬಾಳೆ, ಪಪ್ಪಾಯ, ಕೋಕಮ್‌, ಏಲಕ್ಕಿ, ಮೆಣಸು, ಶುಂಠಿ, ಅರಿಶಿಣ ಸೇರಿದಂತೆ ಹಪ್ಪಳ, ಶಾವಿಗೆ ಹಾಗೂ ಸಂಡಿಗೆಗಳನ್ನು ಕೂಡಾ ಒಣಗಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.