ರಾಯಚೂರು: ದಿನಗೂಲಿ ಮಾಡಿ ಶಿಕ್ಷಣ ಕೊಡಿಸಿದ ತಂದೆಯ ಬ್ಯಾಂಕ್ ಖಾತೆಗೆ ಪ್ರತಿತಿಂಗಳು ಪೋಷಣಾ ಭತ್ಯೆ ಜಮಾಗೊಳಿಸುವಂತೆ ಖಾಸಗಿ ಕಂಪೆನಿ ಉದ್ಯೋಗಿಯಾದ ಜೇಷ್ಠ ಪುತ್ರನಿಗೆ ಜಿಲ್ಲೆಯ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ನ್ಯಾಯಮಂಡಳಿಯು ಈಚೆಗೆ ಆದೇಶಿಸಿದೆ.
ಹಣಕಾಸಿನ ಸಂಕಷ್ಟದಲ್ಲಿ ನೆರವಾಗದ ಹಿರಿಯ ಪುತ್ರನು ಹೋಟೆಲ್ನಲ್ಲಿದ್ದು ಐಷಾರಾಮಿ ಜೀವನ ನಡೆಸುತ್ತಿದ್ದು, ಪುತ್ರನಿಂದ ಪ್ರತಿತಿಂಗಳು ನೆರವು ಕೊಡಿಸಬೇಕು ಎಂದು ನಗರದ ಜಹೀರಾಬಾದ್ ನಿವಾಸಿಯೊಬ್ಬರು ಎಸ್ಪಿ ಕಚೇರಿಯಲ್ಲಿರುವ ಪೋಷಕರ ಸಾಂತ್ವನ ಕೇಂದ್ರಕ್ಕೆ ದೂರು ಸಲ್ಲಿಸಿದ್ದರು.
ಮೇಲ್ಮನವಿ ಬಂದಿದ್ದ ದೂರನ್ನು ವಿಚಾರಣೆ ನಡೆಸಿದ ರಾಯಚೂರು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು, ಪ್ರತಿ ತಿಂಗಳು ತಂದೆಯ ಖಾತೆಗೆ ಅರ್ಧದಷ್ಟು ವೇತನ ₹20 ಸಾವಿರ ಜಮಾಗೊಳಿಸಬೇಕು. ಪ್ರತಿ ತಿಂಗಳು ಭೇಟಿಮಾಡಿ ಯೋಗಕ್ಷೇಮ ವಿಚಾರಿಸಬೇಕು ಹಾಗೂ ಪ್ರತಿ ಭಾನುವಾರ ಮೊಬೈಲ್ ಮೂಲಕ ಆರೋಗ್ಯ ವಿಚಾರಿಸಬೇಕು ಎಂದು ಮಹತ್ವದ ಆದೇಶ ನೀಡಿದ್ದಾರೆ.
ದೂರುದಾರರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಹಿರಿಯ ಪುತ್ರನು ಖಾಸಗಿ ಕಂಪೆನಿಯಲ್ಲಿ ನೆಟವರ್ಕ್ ಪ್ಲಾನಿಂಗ್ ಎಂಜಿನಿಯರ್ ಉದ್ಯೋಗಕ್ಕೆ ಸೇರ್ಪಡೆಯಾದ ಬಳಿಕ ಮನೆಗೆ ಬರುವುದನ್ನೆ ನಿಲ್ಲಿಸಿದ್ದರು. ಇದರಿಂದ ಚಿಂತೆಗೊಳಗಾದ ತಂದೆಯು, ‘ಇಷ್ಟು ವರ್ಷ ಕಷ್ಟಪಟ್ಟು ಸಾಕಿದ್ದೇನೆ. ಆದರೆ ಈಗ ಪುತ್ರನು ಆರ್ಥಿಕ ಸಂಕಷ್ಟಕ್ಕೆ ನೆರವಾಗುತ್ತಿಲ್ಲ. ಹೋಟೆಲ್ ಊಟ ಮಾಡಿಕೊಂಡು, ಲಾಡ್ಜ್ನಲ್ಲಿ ಉಳಿದು ಐಷಾರಾಮಿ ಜೀವನ ಸಾಗಿಸುತ್ತಿದ್ದಾನೆ. ಇನ್ನುಳಿದ ಮಕ್ಕಳು ಇನ್ನೂ ಓದುತ್ತಿದ್ದಾರೆ’ ಎಂದು ದೂರು ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.