ಲಿಂಗಸುಗೂರು: ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರು ಗ್ರಾಮದಲ್ಲಿ ಶನಿವಾರ ಬೀದಿ ನಾಯಿಗಳ ಹಾವಳಿಗೆ ಐದು ವರ್ಷದ ಬಾಲಕನೊಬ್ಬ ಸಾವಿಗೀಡಾಗಿದ್ದಾನೆ.
ಕಸಬಾಲಿಂಗಸುಗೂರು ಗ್ರಾಮದ ಸಿದ್ದು ಬೀರಪ್ಪ ಗುಡಿಹಾಳ (5) ನಾಯಿಗಳ ದಾಳಿಯಿಂದ ಮೃತಪಟ್ಟ ಬಾಲಕ. ತಾಯಿ ಶೌಚಾಲಯಕ್ಕೆ ತೆರಳಿದ್ದಾರೆಂದು ಭಾವಿಸಿ ಸಿದ್ದು ಅಲ್ಲಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.
ಶೌಚಾಲಯದ ಹತ್ತಿರ ಆಗತಾನೇ ಮರಿಗಳಿಗೆ ಜನ್ಮ ನೀಡಿದ್ದ ನಾಯಿಯೊಂದು, ಬಾಲಕ ತನ್ನ ಮರಿಗಳಿಗೆ ಏನಾದರೂ ಮಾಡಿಯಾನು ಎಂದು ಬೊಗಳಲು ಪ್ರಾರಂಭಿಸಿದ್ದರಿಂದ ಸುತ್ತಮುತ್ತ ಇದ್ದ ಹತ್ತಾರು ನಾಯಿಗಳು ಏಕಾಏಕಿಯಾಗಿ ಬಾಲಕನ ಮೇಲೆ ದಾಳಿ ಮಾಡಿದ್ದವು ಕುತ್ತಿಗೆ ಸೇರಿ ಎಲ್ಲೆಂದರಲ್ಲಿ ಕಚ್ಚಿ ಎಳೆದಾಡಿ ಭೀಕರವಾಗಿ ಗಾಯಗೊಳಿಸಿದ್ದವು.
ಬಾಲಕನ ಕಿರುಚಾಟ, ನಾಯಿಗಳ ಕೂಗಾಟ ಕೇಳಿ ಹತ್ತಿರದಲ್ಲಿದ್ದ ಜನರು ಓಡಿ ಬಂದಿದ್ದಾರೆ. ನಾಯಿಗಳನ್ನು ಓಡಿಸಿ ರಕ್ತ ಮಡುವಿನಲ್ಲಿದ್ದ ಬಾಲಕನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಿ ಬಾಲಕ ಮೃತಪಟ್ಟಿದ್ದ. ಮಗನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದರೆ, ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.