
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್. ಶಶಿಧರ ಶೆಟ್ಟಿ ಉದ್ಘಾಟಿಸಿದರು.
ರಾಯಚೂರು: ‘ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿದ್ಯಾರ್ಥಿಗಳ ಕ್ಲಬ್ ರಚಿಸಿ ಅಥವಾ ಎನ್ಎಸ್ಎಸ್ ಶಿಬಿರಗಳ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಕಾನೂನು ಅರಿವು ಮೂಡಿಸಬೇಕು’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್. ಶಶಿಧರ ಶೆಟ್ಟಿ ಸಲಹೆ ನೀಡಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರತಿಯೊಬ್ಬ ವಿದ್ಯಾರ್ಥಿಗೂ ಕಾನೂನು ಸೇವಾ ಪ್ರಾಧಿಕಾರದ ಬಗ್ಗೆ ಮಾಹಿತಿ ಇರಬೇಕು. ಮೂಲಭೂತ ಹಕ್ಕುಗಳಿಗಿಂತಲೂ ಕರ್ತವ್ಯಗಳ ಮಾಹಿತಿಯ ಅರಿವು ಮೂಡಿಸುವುದು ಮುಖ್ಯ. ವಾಹನ ಅಪಘಾತಗಳು, ಲೈಂಗಿಕ ದೌರ್ಜನ್ಯ, ಡ್ರಗ್ಸ್ ಮಾರಾಟ, ವೃದ್ದರ ಪೋಷಣೆಯ ನಿರ್ಲಕ್ಷ್ಯ, ಕಾನೂನು ನೆರವು, ಲೋಕ್ ಅದಾಲತ್, ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಪೋಕ್ಸೊ ಕಾಯ್ದೆ ಅರಿವು ಹೊಂದಬೇಕು’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಸಚಿವ ಎ.ಚನ್ನಪ್ಪ ಮಾತನಾಡಿ, ‘ಶಿಕ್ಷಣ ದೊರೆಯುತ್ತಿದೆ. ಆದರೆ ನೈತಿಕತೆ ಕಡಿಮೆಯಾಗುತ್ತಿದೆ. ಅವಿಭಕ್ತ ಕುಟುಂಬದಲ್ಲಿ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯ ಜೊತೆಗೆ ಮಕ್ಕಳಿಗೆ ಸಾಕಷ್ಟು ವಿಷಯಗಳ ಅರಿವು ಮೂಡುತ್ತಿತ್ತು. ಇಂದಿನ ಕಾಲಮಾನದಲ್ಲಿ ಮೌಲ್ಯಗಳಿಂದ ಹಿಂದೆ ಸರಿಯುತ್ತಿದ್ದಾರೆ’ ಎಂದರು.
‘ಇಂದಿನ ಯುವ ಪೀಳಿಗೆ ಯಾವುದೋ ಒಂದು ಮಾಯಾ ಡಿಜಿಟಲ್ ಲೋಕಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡು ಗೊತ್ತು, ಗೊತ್ತಿಲ್ಲದೆಯೇ ಅಪರಾಧಗಳಲ್ಲಿ ತೊಡಗಿಸಿಕೊಂಡು ನೈತಿಕತೆಯಿಂದ ದೂರ ಹೋಗುತ್ತಿರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅಪರಾಧ ತಡೆ, ಭಷ್ಟಚಾರ ತಡೆ, ಸಾಕಷ್ಟು ಕಾನೂನುಗಳ ಅರಿವು ನೆರವು ಮುಖ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.
‘ಇಂತಹ ಜಾಗೃತಿ ಕಾರ್ಯಕ್ರಮಗಳು ಅವರಿಗೆ ಉಪಯೊಗ ವಾಗಬಲ್ಲವು. ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ಹಮ್ಮಿಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಯಾಗಿದ್ದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಮತ್ತು ಎಚ್.ಆರ್.ಎ.ಸಿ.ಎಫ್ ರಾಷ್ಟ್ರೀಯ ಅಧ್ಯಕ್ಷ ಮೋಹನರಾವ್ ನಾಲ್ವಡೆ , ಹಿರಿಯ ಸಿವಿಲ್ ನ್ಯಾಯಧೀಶ ಪಿ.ಎಂ.ಬಾಲಸುಬ್ರಮಣಿ ಮಾತನಾಡಿದರು.
ಹಿರಿಯ ವಕೀಲ ಶಿವಶಂಕರ ಎನ್., ಕಾನೂನು ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಾಶಂಕರ ವೇದಿಕೆ ಉಪಸ್ಥಿತರಿದ್ದರು. ಹಣಕಾಸು ಅಧಿಕಾರಿ ಡಾ.ಸುಯಮೀಂದ್ರ ಕುಲಕರ್ಣಿ, ಉಪ ಕುಲಸಚಿವ ಕೆ.ವೆಂಕಟೇಶ್, ನವೋದಯ ಶಿಕ್ಷಣ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾದ್ಯಾಪಕಿ ವಿಜಯಕುಮಾರಿ, ವಿವಿಯ ವಿವಿಧ ವಿಭಾಗಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎಚ್.ಆರ್.ಎ.ಸಿ.ಎಫ್ ಹಾಗೂ ವಾಲ್ಮೀಕಿ ವಿವಿಯ ಕಾನೂನು ಜಾಗೃತಿ ಸಮಿತಿಯ ಸಹ ಮುಖ್ಯಸ್ಥ ಪ್ರೊ.ಪ್ರಾಣೇಶ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿವಿಯ ಗಣಿತ ವಿಭಾಗದ ವಿದ್ಯಾರ್ಥಿನಿ ರೂಪಶ್ರೀ ಪ್ರಾರ್ಥಿಸಿದರು, ನವೋದಯ ಶಿಕ್ಷಣ ಮಹಾವಿದ್ಯಾಲಯದ ಗಣಿತ ಸಹಾಯಕ ಪ್ರಾದ್ಯಾಪಕಿ ಉಮಾಶ್ರೀ ಬಿ.ಕೆ. ಸ್ವಾಗತಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಸಹ ಪ್ರಾದ್ಯಾಪಕ ಶಿವಯ್ಯ ಹಿರೇಮಠ ನಿರೂಪಿಸಿದರು, ವಾಲ್ಮೀಕಿ ವಿವಿಯ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದಾರ ವಂದಿಸಿದರು.
ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕನ ಅಗಲಿಕೆಗೆ ಮೌನಾಚರಣೆ ಮೂಲಕ ಭಾವಪರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ರಾಯಚೂರಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಯಚೂರು ವಿಭಾಗದ ಮಾನವ ಹಕ್ಕುಗಳ ಮತ್ತು ಭ್ರಷ್ಟಚಾರ ವಿರೋಧಿ ಸಂಸ್ಥೆ ಮತ್ತು ಎಚ್.ಆರ್.ಎ.ಸಿ.ಎಫ್ ಮತ್ತು ವಾಲ್ಮೀಕಿ ವಿಶ್ವವಿದ್ಯಾನಿಲಯದ ಕಾನೂನು ಜಾಗೃತಿ ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.