
ಸಚಿವ ಶಿವಾನಂದ ಪಾಟೀಲ
ರಾಯಚೂರು: ‘ನೂತನ ಎಪಿಎಂಸಿ ಕಾಯ್ದೆಯ ಬಗ್ಗೆ ವರ್ತಕರ, ರೈತರ ಅಭಿಪ್ರಾಯ ಪಡೆಯಲು ಸಮಿತಿ ಹಲವೆಡೆ ಸಭೆ ನಡೆಸಿದೆ. ಕ್ರೋಡೀಕೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸಮಿತಿಯ ಒಟ್ಟಾರೆ ಅಭಿಪ್ರಾಯದ ಆಧಾರದ ಮೇಲೆ ಸರ್ಕಾರ ನಿರ್ಣಯ ಕೈಗೊಳ್ಳಲಿದೆ’ ಎಂದು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ–ತಿದ್ದುಪಡಿ) ವಿಧೇಯಕ ಪರಿಶೀಲನಾ ಸಮಿತಿ ಇಲ್ಲಿನ ಗಂಜ್ ಪ್ರದೇಶದ ಎಪಿಎಂಸಿ ಆವರಣದ ಎಪಿಎಂಸಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
‘ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆ ಅನೇಕ ರಾಜ್ಯಗಳಲ್ಲಿ ರದ್ದಾಗಿದೆ. ಆದರೆ ಇನ್ನೂ ಕೆಲವೆಡೆ ಚರ್ಚೆ ನಡೆದಿದೆ. ಕಾಯ್ದೆ ಇರಬೇಕು, ಬದಲಾಯಿಸಬೇಕು ಅಭಿಪ್ರಾಯಗಳು ಬಂದಿವೆ. ಹೀಗಾಗಿ ಸಾಧಕ ಬಾಧಕಗಳನ್ನು ಸರ್ಕಾರ ಪರಿಶೀಲಿಸಲಿದೆ‘ ಎಂದರು.
ರಾಯಚೂರು ಜಿಲ್ಲೆಗೆ ಟೆಕ್ಸ್ಟ್ ಟೈಲ್ ಪಾರ್ಕ್ ಬೇಡಿಕೆಯಿದೆ. ಆದರೆ ಕೇಂದ್ರ ಸರ್ಕಾರ ಪಿ.ಎಂ ಮಿತ್ರ ಯೋಜನೆಯಡಿ ಕಲಬುರಗಿಗೆ ಮಂಜೂರು ಮಾಡಿದೆ‘ ಎಂದು ತಿಳಿಸಿದರು.
‘ರೈತ ಭವನ ಉದ್ಘಾಟನೆ ಮಾಡಿ ಉಪಯೋಗಕ್ಕೆ ಬಾರದ ಬಗ್ಗೆ ಕಾರ್ಯದರ್ಶಿ ಆದೆಪ್ಪ ಅವರಿಂದ ಮಾಹಿತಿ ಪಡೆದಿದ್ದೇನೆ. ಟೆಂಡರ್ ಕರೆದು ಶೀಘ್ರವೇ ಉಪಯೋಗಿಸಲು ಅನುವು ಮಾಡಿಕೊಡಲಾಗುವುದು’ ಎಂದು ಪಾಟೀಲ ಹೇಳಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.