ಲಿಂಗಸುಗೂರು: ಬಜೆಟ್ನಲ್ಲಿ ಪಟ್ಟಣಕ್ಕೆ ಮಂಜೂರು ಮಾಡಲಾಗಿದ್ದ ಜಿಲ್ಲಾಸ್ಪತ್ರೆಯನ್ನು ಸಿಂಧನೂರಿಗೆ ಎತ್ತಂಗಡಿ ಮಾಡಿರುವ ಸರ್ಕಾರದ ಕ್ರಮ ತಾಲ್ಲೂಕಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದಲ್ಲಿರುವ 50 ಹಾಸಿಗೆ ಸಾಮರ್ಥ್ಯದ ಸರ್ಕಾರಿ ತಾಲ್ಲೂಕು ಆಸ್ಪತ್ರೆಯನ್ನು 2004-05ನೇ ಸಾಲಿನಲ್ಲಿ 100 ಹಾಸಿಗೆ ಸಾಮರ್ಥ್ಯದ ಉಪವಿಭಾಗ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ.
100 ಹಾಸಿಗೆಯಿಂದ 200 ಹಾಸಿಗೆ ಆಸ್ಪತ್ರೆಯನ್ನಾಗಿ 2015ರಲ್ಲಿ ಮೇಲ್ದರ್ಜೆಗೇರಿಸಲಾಗಿತ್ತಾದರೂ ಇಲ್ಲಿನ ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಿನ್ನೆಲೆಯಲ್ಲಿ ಅದು ಕಾರ್ಯರೂಪಕ್ಕೆ ಬರಲಿಲ್ಲ. ಹೆಸರಿಗೆ ಉಪವಿಭಾಗ ಆಸ್ಪತ್ರೆಯಾದರೂ ಜಿಲ್ಲಾಸ್ಪತ್ರೆಗಿಂತ ಅಧಿಕ ಸೇವೆ ಇಲ್ಲಿ ನೀಡಲಾಗುತ್ತಿದೆ.
ಕೊಟ್ಟು ಕಸಿದುಕೊಂಡ ಸರ್ಕಾರ: 2024ರ ಸೆ.17ರಂದು ಕಲಬುರಗಿಯಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಪಟ್ಟಣದ ಉಪವಿಭಾಗ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಣಯಿಸಲಾಗಿತ್ತು. ನಂತರ 2025-26ನೇ ಸಾಲಿನ ಬಜೆಟ್ನಲ್ಲಿಯೂ ಸಿಎಂ ಸಿದ್ಧರಾಮಯ್ಯ ಇದನ್ನು ಘೋಷಿಸಿದ್ದರು.
ಜಿಲ್ಲಾಸ್ಪತ್ರೆ ಮಂಜೂರಾಗಿದ್ದರಿಂದ ಹೊಸ ಕಟ್ಟಡ ನಿರ್ಮಾಣಕ್ಕಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪಕ್ಕದಲ್ಲಿ 6 ಎಕರೆ ಜಾಗ ಒದಗಿಸಲಾಗಿತ್ತು. ಆದರೆ, ಮೇ 22ರಂದು ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲಾಸ್ಪತ್ರೆಯನ್ನು ರದ್ದು ಮಾಡಿ ಅದನ್ನು ಸಿಂಧನೂರಿಗೆ ಎತ್ತಂಗಡಿ ಮಾಡಿ ನಿರ್ಣಯ ಮಾಡಲಾಗಿದೆ. ಇದು ಇಲ್ಲಿನ ಜನರ ಆಕ್ರೋಶಕ್ಕೆ ಗುರಿಯಾಗಿದೆ.
ಈ ಹಿಂದೆ ಕೆಪಿಟಿಸಿಎಲ್ ವಿಭಾಗೀಯ ಕಚೇರಿ, ಕೃಷಿ ಉಪನಿರ್ದೇಶಕ ಕಚೇರಿಗಳನ್ನು ಸಿಂಧನೂರಿಗೆ ಸ್ಥಳಾಂತರ ಮಾಡುವಂತೆ ಅಲ್ಲಿನ ಜನಪ್ರತಿನಿಧಿಗಳು ಸಚಿವರಿಗೆ ಪತ್ರ ಬರೆದಿದ್ದರು. ಇಲ್ಲಿನ ಜನರ ಆಕ್ರೋಶ ಹಾಗೂ ಒತ್ತಡಕ್ಕೆ ಮಣಿದು ಸರ್ಕಾರ ಸ್ಥಳಾಂತರ ಪ್ರಕ್ರಿಯೆ ಕೈಬಿಟ್ಟಿತ್ತು.
ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ: ಪಟ್ಟಣಕ್ಕೆ ಮಂಜೂರಾಗಿದ್ದ ಜಿಲ್ಲಾಸ್ಪತ್ರೆಯನ್ನು ಏಕಾಏಕಿಯಾಗಿ ಸಿಂಧನೂರಿಗೆ ಎತ್ತಂಗಡಿ ಮಾಡಿದ್ದಾರೆ. ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರಿಗೆ ತಾಲೂಕಿನ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದಿರುವುದೇ ಇದಕ್ಕೆ ಕಾರಣ. ಇದೇ ರೀತಿ ನಿರ್ಲಕ್ಷ್ಯ ಮುಂದುವರಿದರೆ ಉಪವಿಭಾಗ ಸ್ಥಾನಮಾನವನ್ನೂ ಕಸಿದುಕೊಂಡರೆ ಅಚ್ಚರಿಯಿಲ್ಲ ಎಂದು ದಲಿತ ಹೋರಾಟಗಾರ ಲಿಂಗಪ್ಪ ಪರಂಗಿ ಹೇಳುತ್ತಾರೆ.
‘ಬಂದ್ಗೆ ಚಿಂತನೆ’: ಸಿಂಧನೂರಿಗೆ ಜಿಲ್ಲಾಸ್ಪತ್ರೆ ಮಂಜೂರು ಮಾಡಿದರೆ ನಮ್ಮ ತಕರಾರಿಲ್ಲ. ಆದರೆ ಲಿಂಗಸುಗೂರಿಗೆ ಕೊಟ್ಟಿದ್ದನ್ನು ಏಕಾಏಕಿ ರದ್ದುಗೊಳಿಸಿದ್ದು ತಪ್ಪು. ಎರಡು–ಮೂರು ದಿನಗಳಲ್ಲಿ ಜಿಲ್ಲಾಸ್ಪತ್ರೆ ಮಂಜೂರು ಮಾಡದಿದ್ದರೆ ಲಿಂಗಸುಗೂರು ಬಂದ್ ಮಾಡಲಾಗುವುದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ ತಿಳಿಸಿದರು.
ಲಿಂಗಸುಗೂರಿಗೆ ಮಂಜೂರು ಮಾಡಿದ್ದ ಜಿಲ್ಲಾಸ್ಪತ್ರೆಯನ್ನು ಸಿಂಧನೂರಿಗೆ ನೀಡಿದ್ದನ್ನು ನಾನು ಸಹಿಸುವುದಿಲ್ಲ. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ನಿರ್ಣಯ ವಾಪಸ್ ಪಡೆಯಬೇಕು ಎಂದು ಮನವಿ ಮಾಡುತ್ತೇನೆ. ಇದಕ್ಕಾಗಿ ಹೋರಾಟಕ್ಕೂ
–ಸಿದ್ಧ ಮಾನಪ್ಪ ವಜ್ಜಲ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.